ಮಂಗಳೂರು, ಮೇ 16 (DaijiworldNews/SM): ರವಿವಾರದಂದು ಕಾಪು ಬಳಿಯ ಬಂಡೆಗಳಿಗೆ ದೋಣಿ ಅಪ್ಪಳಿಸಿ ಅಪಘಾತಕ್ಕೀಡಾಗಿರುವ ಟಗ್ ಬೋಟ್ ನಲ್ಲಿರುವ ಒಂಬತ್ತು ಮಂದಿ ಕಾರ್ಮಿಕರು ಸುರಕ್ಷಿತವಾಗಿದ್ದು, ಅವರನ್ನು ರಕ್ಷಿಸಿ ಕರೆ ತರುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿದೆ. ಹೆಲಿಕಾಪ್ಟರ್ ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದೆಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.
ಟಗ್ ಬೋಟ್ ಅಪಘಾತಕ್ಕೀಡಾಗಿ ಒಂಬತ್ತು ಮಂದಿ ಕಾರ್ಮಿಕರು ಅಪಾಯದಲ್ಲಿದ್ದಾರೆ. ಅವರು ಸದ್ಯ ಸುರಕ್ಷಿತವಾಗಿದ್ದಾರೆ. ಒಂದು ದಿನಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳು ಅವರ ಬಳಿ ಇವೆ. ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ವೈಪರಿತ್ಯ ಹಿನ್ನೆಲೆ ಅಸಾಧ್ಯವಾಗಿದೆ. ಸಮುದ್ರದ ಮೂಲಕ ತೆರಳಲು ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸಾಧ್ಯವಾಗುತ್ತಿಲ್ಲ. ಹೆಲಿಕಾಪ್ಟರ್ ಮೂಲಕ ನಡೆಸಲು ಹವಾಮಾನ ವೈಪರಿತ್ಯ ಅಡ್ಡಿಯಾಗಿದ್ದು, ಈ ಸಮಸ್ಯೆ ಸರಿಯಾದ ಕೂಡಲೇ ಕಾರ್ಯಾಚರಣೆ ಚುರುಕುಗೊಳಿಸಲಾಗುವುದೆಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಭರವಸೆ ನೀಡಿದ್ದಾರೆ.