ಗಂಗೊಳ್ಳಿ, ಮೇ.16 (DaijiworldNews/HR): ಮರವಂತೆ ಮೀನುಗಾರಿಕಾ ಹೊರಬಂದರಿನ ಸಮೀಪದ 500 ಮೀಟರು ಉದ್ದದ ತೀರದಲ್ಲಿ ಋತುಭೇದವಿಲ್ಲದೆ ಕಡಲ್ಕೊರೆತ ಸಂಭವಿಸುತ್ತಿದ್ದು, ಈಗ ಬಂದ ಚಂಡಮಾರುತದಿಂದ ಸಮುದ್ರ ಉಕ್ಕೇರಿ ಇಲ್ಲಿನ ಜೀವನಾಡಿಯಾಗಿರುವ ಕರಾವಳಿ ಮಾರ್ಗದ ಸುಮಾರು 25 ಮೀಟರು ಭಾಗ ಸಂಪೂರ್ಣ ಕುಸಿದು ಸಂಪರ್ಕ ಕಡಿತವಾಗಿದೆ. ಈ ಪ್ರದೇಶದ ಮಾರಸ್ವಾಮಿಯಲ್ಲಿ ಹೆದ್ದಾರಿ ರಕ್ಷಣೆಗೆ ಕೈಗೊಂಡ 'ಸುಸ್ಥಿರ ಕಡಲತೀರ ಸಂರಕ್ಷಣಾ ಯೋಜನೆ' ಮಾದರಿಯನ್ನು ಅನುಷ್ಠಾನಿಸಲು ಪ್ರಯತ್ನಿಸಲಾಗುವುದು ಎಂದು ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಡಲ್ಕೊರೆತ ಮತ್ತು ಚಂಡಮಾರುತದಿಂದ ತೀವ್ರ ಹಾನಿಗೊಂಡ ಮರವಂತೆ ಮೀನುಗಾರರ ಹೊರ ಬಂದರು ಸಮೀಪದ ಪ್ರದೇಶಕ್ಕೆ ರವಿವಾರ ಭೇಟಿ ನೀಡಿ ಮೀನುಗಾರರೊಂದಿಗೆ ಮಾತನಾಡಿದ ಅವರು, "ಸುಸ್ಥಿರ ಯೋಜನೆ ಕಾರ್ಯಗತವಾಗುವವರೆಗೆ, ಈ ಪ್ರದೇಶದಲ್ಲಿ ಇನ್ನಷ್ಟು ಹಾನಿಯಾಗುವುದನ್ನು ತಡೆಯಲು ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ವಿನಂತಿಸಲಾಗುವುದು. ಸಮುದ್ರ ಕಬಳಿಸಿರುವ ಜಮೀನು ಹಾಗೂ ಮರಗಳಿಗೆ ಪರಿಹಾರ ದೊರಕಿಸಲಾಗುವುದು" ಎಂದು ಹೇಳಿದರು.
ಬೈಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ ಖಾರ್ವಿ, ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ., ಮೀನುಗಾರ ಮುಖಂಡರಾದ ಮೋಹನ ಖಾರ್ವಿ, ಸೋಮಯ್ಯ ಖಾರ್ವಿ, ಚಂದ್ರ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.