ಉಡುಪಿ, ಮೇ.16 (DaijiworldNews/HR): ಎಂಆರ್ಪಿಎಲ್ಗೆ ಸೇರಿದ ಮತ್ತೊಂದು ಟಗ್ ಬೋಟ್ ರವಿವಾರ ಅಪಘಾತಕ್ಕೀಡಾಗಿದ್ದು, ಕಾಪು ಬಳಿಯ ಬಂಡೆಗಳಿಗೆ ದೋಣಿ ಅಪ್ಪಳಿಸಿದೆ ಎಂದು ಹೇಳಲಾಗಿದೆ.
ಟಗ್ ಬೋಟ್ ಅನ್ನು ಹೊಸ ಮಂಗಳೂರು ಬಂದರಿನ ಹೊರವಲಯದಲ್ಲಿ ಲಂಗರು ಹಾಕಲಾಗಿತ್ತು. ಚಂಡಮಾರುತದಿಂದಾಗಿ ಆಂಕರ್ ಹಾನಿಗೊಳಗಾದ ನಂತರ ದೋಣಿ ಕಾಪುವರೆಗೆ ತಲುಪಿದೆ.
ಕಾಪು ಲೈಟ್ ಹೌಸ್ನಲ್ಲಿ ದೋಣಿಯನ್ನು ಸುರಕ್ಷಿತವಾಗಿ ತರಲು ಪೊಲೀಸ್ ಇಲಾಖೆ ಮತ್ತು ಕೋಸ್ಟ್ ಗಾರ್ಡ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
"9 ಮಂದಿ ದೋಣಿಯಲ್ಲಿ ಇದ್ದು, ಅವರು ತೀರದಿಂದ 4 ಕಿ.ಮೀ ವ್ಯಾಪ್ತಿಯಲ್ಲಿದ್ದಾರೆ. ಅವರನ್ನು ಇಂದು ಮಧ್ಯಾಹ್ನದ ಹೊತ್ತಿಗೆ ರಕ್ಷಿಸಿ ಸಮುದ್ರ ತೀರಕ್ಕೆ ತರಲಾಗುವುದು. ದೋಣಿ ಎಂಆರ್ಪಿಎಲ್ ನಿರ್ವಹಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ" ಎಂದು ಕರಾವಳಿ ಕಾವಲು ಪೋಲಿಸ್ ಎಸ್ಪಿ ಚೇತನ್ ಹೇಳಿದ್ದಾರೆ.
ಇನ್ನು ದೋಣಿಯಲ್ಲಿ ಇರುವವರು ರಕ್ಷಣೆಗಾಗಿ ಕರಾವಳಿ ಕಾವಲು ಪಡೆಯವರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಕಿರೋಶ್ ಎಂಬ ಕಂಪನಿಗೆ ಸೇರಿದ ಟಗ್ ಬೋಟ್ ಇದಾಗಿದೆ. ಇದೀಗ ಬೋಟ್ ಕಾಪು ಲೈಟ್ ಹೌಸ್ ನಿಂದ ಅನತಿ ದೂರದಲ್ಲಿ ಬಂಡೆಗೆ ತಾಗಿ ನಿಂತಿದೆ.
ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ್ ಮತ್ತು ಕಂಪನಿಯ ಅಧಿಕಾರಿಗಳು ಕರಾವಳಿ ಕಾವಲು ಪಡೆ, ನೌಕಾ ಪಡೆ ಮತ್ತು ಪೋಲಿಸ್ ಇಲಾಖೆ ಸ್ಥಳದಲ್ಲಿ ಇದ್ದು ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಾ ಇದ್ದಾರೆ.