ಉಡುಪಿ, ಮೇ.16 (DaijiworldNews/HR): ಚಂಡಮಾರುತ ಪೀಡಿತ ಪಡುಕೆರೆ ಮತ್ತು ಮಲ್ಪೆಯ ಭಾಗಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ರವಿವಾರ ಭೇಟಿ ನೀಡಿ, ಮಳೆಯಿಂದಾಗಿ ಹಾನಿಗೊಳಗಾದ ಜನರಿಗೆ ಜಿಲ್ಲಾಡಳಿತ 14 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ.
ಚಂಡಮಾರುತದಿಂದ ಹಾನಿಗೊಳಗಾದ ಸ್ಥಳಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ, "ತೌಕ್ತೇ ಚಂಡಮಾರುತವು ಜಿಲ್ಲೆಯ ವಿವಿಧ ಭಾಗಗಳ ಮೇಲೆ ಭಾರಿ ಪರಿಣಾಮ ಬೀರಿದ್ದು, ಅನೇಕ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ನಮ್ಮ ಅಧಿಕಾರಿಗಳ ತಂಡ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ ಹಾನಿಯ ವಿವರವಾದ ವರದಿಗಳನ್ನು ದಾಖಲಿಸುವಂತೆ ನಾನು ಅವರಿಗೆ ಸೂಚನೆ ನೀಡಿದ್ದೇನೆ" ಎಂದರು.
ಆರಂಭಿಕ ವರದಿಗಳ ಪ್ರಕಾರ, "ಜಿಲ್ಲೆಯ 36 ಮನೆಗಳಿಗೆ ಹಾನಿಯಾಗಿದ್ದು, ಅನೇಕ ಮೀನುಗಾರಿಕಾ ರಸ್ತೆಗಳ ಮೇಲೂ ಪರಿಣಾಮ ಬೀರಿದ್ದು, ಅನೇಕ ವಿದ್ಯುತ್ ತಂತಿಗಳು ಕೂಡ ತುಂಡಾಗಿ ಬಿದ್ದಿದ್ದು, ವಿದ್ಯುತ್ ಅನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಮೆಸ್ಕಾಮ್ ಸಿಬ್ಬಂದಿಯನ್ನು ಕೇಳಲಾಗಿದೆ. ಪಿಡಬ್ಲ್ಯೂಡಿ ರಸ್ತೆಗಳು ಸಹ ಹಾನಿಗೀಡಾಗಿವೆ" ಎಂದಿದ್ದಾರೆ.
ಇನ್ನು ಮಳೆಯಿಂದಾಗಿ ಹಾನಿಗೊಳಗಾದ ಜನರಿಗೆ ಜಿಲ್ಲಾಡಳಿತ 14 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು, 60 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದ್ದು, ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದೇವೆ. ಮಂಗಳೂರಿನಿಂದ ಕಾಣೆಯಾದ ಒಂದು ದೋಣಿ ಪಡುಬಿದ್ರಿ ಬಳಿ ಪತ್ತೆಯಾಗಿದ್ದು, ಆ ದೋಣಿಯಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ, ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂಡಮಾರುತ ಗೋವಾ ಕರಾವಳಿಯನ್ನು ದಾಟಿದೆ ಮತ್ತು ಇದರ ನಂತರ, ಪ್ರತ್ಯೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ" ಎಂದು ಹೇಳಿದರು.
"ಪುನರ್ವಸತಿ ಕೇಂದ್ರಗಳಲ್ಲಿ ಕೂಡ ಕೋವಿಡ್ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು. ಒಂದು ಕುಟುಂಬಕ್ಕೆ ಒಂದೇ ಕೊಠಡಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಅನೇಕ ಶಾಲೆಗಳು ಮತ್ತು ಕಾಲೇಜುಗಳನ್ನು ಪುನರ್ವಸತಿ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ" ಎಂದಿದ್ದಾರೆ.
ಜಿಲ್ಲೆಯ ಕೋವಿಡ್ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, "ನಮ್ಮ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಕೊರೊನಾ ಪ್ರಮಾಣವು ಸುಮಾರು 33-34% ಆಗಿದ್ದು, ಪಾಸಿಟಿವ್ ದರವನ್ನು ಕಡಿಮೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿದಿನ 2,500 ರಿಂದ 3,000 ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಯಾರಿಗಾದರು ರೋಗಲಕ್ಷಣಗಳಿದ್ದರೆ, ದಯವಿಟ್ಟು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಮತ್ತು ನಿಗದಿತ ಚಿಕಿತ್ಸೆಯನ್ನು ತೆಗೆದುಕೊಳ್ಳಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಒ ಡಾ.ನವೀನ್ ಭಟ್, ತಹಶೀಲ್ದಾರ್ ಪ್ರದೀಪ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.