ಉಡುಪಿ, ಮೇ.16 (DaijiworldNews/PY): ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆ ಸಂಸದೆ ಶೋಭಾ ಕರಂದ್ಲಾಜೆ ಅವರು ಮೇ 16ರ ರವಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಿದರು.
ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯ ನಾಗರಿಕರಿಗೆ ಬೆಡ್ ಹಂಚಿಕೆ, ಆಕ್ಸಿಜನ್ ಪೂರೈಕೆ, ರೆಮ್ಡಿಸಿವರ್ ಸರಬರಾಜು, ವ್ಯಾಕ್ಸಿನ್ ನೀಡುವಿಕೆ ಮುಂತಾದ ವಿಚಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಜಿಲ್ಲಾಡಳಿತದ ಕೊರೊನಾ ನಿರ್ವಹಣಾ ತಂಡಕ್ಕೆ ಮಾರ್ಗದರ್ಶನ ನೀಡಿದ ಅವರು, "ಆಸ್ಪತ್ರೆಗಳಿಗೆ ದಾಖಲಾಗುವ ಜಿಲ್ಲೆಯ ಯಾವುದೇ ಕೊರೊನಾ ಸೋಂಕಿತರಿಗೆ ಯಾವುದೇ ಕೊರತೆಯಾಗದಂತೆ ಯಾವ ರೀತಿ ಸನ್ನದ್ದರಾಗಬೇಕು" ಎಂದು ತಿಳಿಸಿದ್ದಾರೆ.
ಗ್ರಾ.ಪಂ. ಮಟ್ಟದ ಕೊರೊನಾ ಕಾರ್ಯಪಡೆಯು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ಸಭೆ ನಡೆಯುತ್ತಿದ್ದ ಸಂದರ್ಭ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿದ ಅವರು, ಜಿಲ್ಲೆಗೆ ಆಮ್ಲಜನಕ, ರೆಮ್ಡೆಸಿವಿರ್ ಮತ್ತು ಇತರ ಅಗತ್ಯ ಔಷಧಿಗಳನ್ನು, ವೈದ್ಯಕೀಯ ಉಪಕರಣಗಳ ಪೂರೈಕೆ ಕುರಿತು ಚರ್ಚಿಸಿ, ಶೀಘ್ರವೇ ಪೂರೈಕೆ ಮಾಡುವಂತೆ ಹೇಳಿದರು.
"ಕೊರೊನಾದ ಎರಡನೇ ಅಲೆ ಹಿಮ್ಮೆಟ್ಟುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ. ಜಿಲ್ಲೆಯ ಜನರು ಅದರಲ್ಲೂ ಮುಖ್ಯವಾಗಿ ಸೋಂಕಿತರು ಹಾಗೂ ಅವರ ಕುಟುಂಬಗಳ ಸದಸ್ಯರು ಯಾವುದೇ ಒತ್ತಡ, ಆತಂಕಕ್ಕೊಳಗಾಗುವುದು ಬೇಡ" ಎಂದರು.
ತೌಕ್ತೆ ಚಂಡಮಾರುತ ಪರಿಣಾಮಗಳನ್ನು ಎದುರಿಸಲು ಕರವಳಿ ಭಾಗಗಳಲ್ಲಿ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವಲೋಕಿಸಿದರು. "ಅಗತ್ಯ ಇರುವ ತೀರ ಪ್ರದೇಶಗಳ ನಿವಾಸಿಗಳನ್ನು ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ" ಎಂದು ಹೇಳಿದರು.
ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ ಸಿಇಓ ಡಾ.ವೈ. ನವೀನ್ ಭಟ್, ಜಿ.ಪಂ ಯೋಜನಾಧಿಕಾರಿ ಎ.ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಉಪವಿಭಾಗಾಧಿಕಾರಿ ರಾಜು, ಡಿ.ಹೆಚ್.ಓ ಡಾ.ಸುಧೀರ್ ಚಂದ್ರ ಸೂಡ ಹಾಗೂ ಮತ್ತಿತರರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.