ಮಂಗಳೂರು, ಮೇ.16 (DaijiworldNews/PY): ಕೊರೊನಾದ 2ನೇ ಅಲೆಯು ನಿರೀಕ್ಷೆ ಮೀರಿ ಹರಡುತ್ತಿದ್ದು, ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಕಾರ್ಯ ಒತ್ತಡ ಹೆಚ್ಚಾಗುತ್ತಿದೆ. ಕೊರೊದನಾ ತೀವ್ರತೆ ಅನೇಕ ಸಂದಿಗ್ಧತೆ ತಂದೊಡ್ಡುತ್ತಿದೆ ಇದನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಚಿಕಿತ್ಸೆ ನೀಡಿ ಜನರ ಜೀವ ಉಳಿಸುತ್ತಿರುವ ವೈದ್ಯರುಗಳಿಗೆ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೃತಜ್ಞತೆ ತಿಳಿಸಿ ಅವರ ಕಾರ್ಯವನ್ನು ಪ್ರಶಂಸಿದರು.
ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಮಾಡಿರುವ ರಾಜ್ಯದ ಆಯ್ದ ಕೆಲವು ವೈದ್ಯಾಧಿಕಾರಿಗಳೊಂದಿಗೆ ಅವರು ಮೇ 15ರ ಶನಿವಾರ ಆನ್ ಲೈನ್ ಮೂಲಕ ಸಂವಾದ ನಡೆಸಿ ಮಾತನಾಡುತ್ತಾ, "ತಮ್ಮ ಜೀವದ ಹಂಗನ್ನು ತೊರೆದು ಮಾನವೀಯ ನೆಲೆಗಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಿವೇಲ್ಲರೂ ನಾಡಿನ ಅಮೂಲ್ಯ ಆಸ್ತಿಯಾಗಿದ್ದು, ಸರ್ಕಾರ ನಿಮ್ಮೆಲ್ಲರ ಪರವಾಗಿರುತ್ತದೆ ಎಂದ ಮುಖ್ಯಮಂತ್ರಿಯವರು ನಿಮ್ಮ ಮತ್ತು ಕುಟುಂಬದ ಸದಸ್ಯರ ಆರೋಗ್ಯದ ಕಡೆ ಕೂಡ ಗಮನಹರಿಸಿ" ಎಂದರು.
ವೆನ್ಲಾಕ್ ಆಸ್ಪತ್ರೆ ವೈದ್ಯ ಡಾ. ಶರತ್ ಬಾಬು ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂವಾದದಲ್ಲಿ ಮಾತನಾಡುತ್ತಾ, "ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಚಿಕಿತ್ಸೆ ನಂತರ ಅವರಿಗೆ ಪುರ್ನವಸತಿ ಒದಗಿಸುವ ಬಗ್ಗೆ ಕೆಲಸ ನಿರ್ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಎಲ್ಲಾ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ 210 ಕೊರೊನಾ ಸೋಂಕಿತರು ದಾಖಲಾಗಿದ್ದ, 30 ಮಂದಿ ಐಸಿಯು ವಾರ್ಡ್ನಲ್ಲಿದ್ದಾರೆ. ಒಂದು ಹೆಚ್ಡಿಯು ವಾರ್ಡ್ ಮಾಡಲಾಗಿದೆ. ಇದರಲ್ಲಿ 50 ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಮರಣ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ" ಎಂದರು.
ಆಕ್ಸಿಜನ್ ಮತ್ತು ರೆಮಿಡಿಸಿವರ್ ಲಭ್ಯತೆ ಬಗ್ಗೆ ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಡಾ. ಶರತ್ ಬಾಬು, "ಜಿಲ್ಲೆಯಲ್ಲಿ ಇದುವರೆಗೆ ಆಕ್ಸಿಜನ್ನ ಗಂಭೀರ ಸಮಸ್ಯೆ ಕಂಡು ಬಂದಿಲ್ಲ ಪ್ರಸ್ತುತ 6,000 ಲೀ ಆಕ್ಸಿಜನ್ ಸಂಗ್ರಹವಿದೆ. ಬಳ್ಳಾರಿಯಿಂದ ಪ್ರತೀ 2 ದಿನಕ್ಕೊಮ್ಮೆ ಆಕ್ಸಿಜನ್ ಬರುತ್ತಿದೆ. ಮುಂಜಾಗ್ರತೆಯಾಗಿ ಜಂಭೋ ಸಿಲಿಂಡರ್ಗಳಲ್ಲಿ ಆಕ್ಸಿಜನ್ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ. ರೆಮಿಡಿಸಿವರ್ ಕೊರತೆಯಾಗಿಲ್ಲ, ಜಿಲ್ಲಾಡಳಿತದ ಆದೇಶದಂತೆ ರೆಮಿಡಿಸಿವರ್ ಅನ್ನು ಜಿಲ್ಲಾ ಎಕ್ಸ್ ಪರ್ಟ್ ಸಮಿತಿ ಮಾರ್ಗಸೂಚಿ ಪ್ರಕಾರ ಜುಡಿಸಿಯಸ್ ಆಗಿ ಬಳಸಲಾಗುತ್ತಿದೆ" ಎಂದರು.
"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಕ್ರಿಟಿಕಲ್ ಕೇರ್ ಸಪೋರ್ಟ ಯೂನಿಟ್ ಮೂಲಕ ವೈದ್ಯರಿಗೆ, ರೋಗಿಗಳಿಗೆ ನೀಡಬೇಕಾದ ಚಿಕಿತ್ಸಾ ವಿಧಾನಗಳ ಕುರಿತು ಅಗತ್ಯ ಸಲಹೆ ಸೂಚನೆಗಳ ಟೆಲಿಕನ್ಸಲ್ಟೇಸನ್ ದೊರೆಯುತ್ತಿದ್ದು, ಇದನ್ನು ಮುಂದುವರೆಸಬೇಕು. ರಾಜೀವ್ ಗಾಂಧೀ ಆಸ್ಪತ್ರೆಯಿಂದ ಈ ಬಗ್ಗೆ ಕಾರ್ಯಗಾರವನ್ನು ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿಗಳು ತಿಳಿಸಿದರು.