ಉಡುಪಿ, ಮೇ.16 (DaijiworldNews/PY): "ಉಡುಪಿ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿರುವ ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ. ಚಂಡಮಾರುತದಿಂದ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಿ. ಆ ನಿಧಿಯಿಂದ ನೀಡಲಾಗಿರುವ 60 ಕೋಟಿ ರೂ. ಅನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ" ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೇ 15ರ ಶನಿವಾರ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
"ತೌಕ್ತೆ ಚಂಡಮಾರುತ ನಾಲ್ಕು ದಿನಗಳ ಕಾಲ ತನ್ನ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿ. ತಗ್ಗು ಪ್ರದೇಶದಿಂದ ಸಾರ್ವಜನಿಕರನ್ನು ಸ್ಥಳಾಂತರಗೊಳಿಸಿ. ಸ್ಥಳಾಂತರಗೊಳಿಸಿದ ಜನರಿಗೆ ಆಹಾರ ಮತ್ತು ಇತರೆ ವಸ್ತುಗಳನ್ನು ಪೂರೈಕೆ ಮಾಡಿ" ಎಂದು ಅಧಿಕಾರಿಗಳಿಗೆ ಆದೇಶಿಸಿದರು.
"ಬೆಂಗಳೂರಿನಿಂದ ಚಂಡಮಾರುತ ಅನಾಹುತ ತಪ್ಪಿಸಲು ಮತ್ತು ಅಪಾಯದಲ್ಲಿ ಸಿಲುಕಿದ್ದ ಜನರನ್ನ ರಕ್ಷಣೆ ಮಾಡಲು ತಂಡವನ್ನು ಕಳುಹಿಸಲಾಗುವುದು. ಪೊಲೀಸ್ ಇಲಾಖೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕೆಲಸ ನಿರ್ವಹಿಸಿ ಅನಾಹುತಗಳು ಸಂಭವಿಸಿದಂತೆ ಕಾರ್ಯ ಮಾಡಿ" ಎಂದು ಬಸವರಾಜ್ ಬೊಮ್ಮಾಯಿ ಸೂಚಿಸಿದರು.
ಈಗಾಗಲೇ ಎಸ್ಟಿಆರ್ಎಫ್ ನಿಧಿಯಿಂದ 60 ಕೋಟಿ ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಆ ಹಣವನ್ನು ಸದ್ಬಳಕೆ ಮಾಡಿಕೊಂಡು ಕೆಲಸ ಮಾಡಿ" ಎಂದು ಸೂಚನೆ ನೀಡಿದರು.
"ಕರಾವಳಿಗೆ ಹೊಂದಿಕೊಂಡಿರುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಚಂಡಮಾರುತ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಅನಾಹುತ, ಆಪತ್ತು ಎದುರಾದರೂ ಅದನ್ನು ನಿವಾರಿಸಲು ಸಿದ್ಧತೆ ಮಾಡಿಕೊಳ್ಳಿ. ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರ ಇರಲಿ" ಎಂದರು.
ಕೊರೊನಾ ನಿಯಂತ್ರಣಕ್ಕೆ ಗಮನಹರಿಸಿ:
"ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ನೀಡಿ. ಖಾಸಗಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರಬೇಕಾದ ಬೆಡ್ಗಳನ್ನು ಪಡೆಯಿರಿ. ಆಕ್ಸಿಜನ್ ಪೂರೈಕೆಯನ್ನು ಸಮರ್ಪಕವಾಗಿ ಕೈಗೊಳ್ಳಿ. ಆಮ್ಲಜನಕವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಕೆಮಾಡಿ. ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸೋಂಕಿತರನ್ನು ಕೊರೊನಾ ಕೇರ್ ಸೆಂಟರ್ನಲ್ಲಿ ದಾಖಲು ಮಾಡಿ. ಇಂಥವರಿಂದ ತೆರವಾದ ಐಸಿಯು ಮತ್ತು ಹೆಚ್ಡಿಯು ಬೆಡ್ಗಳನ್ನು ಗಂಭೀರವಾಗಿ ಸೋಂಕಿತಗೊಂಡ ವ್ಯಕ್ತಿಗಳಿಗೆ ಬಳಕೆಮಾಡಿ" ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮರ್, ಲಾಲಾಜಿ ಆರ್ ಮೆಂಡನ್, ಜಿಲ್ಲಾದಿಕಾರಿ ಜಿ.ಜಗದೀಶ್, ಜಿ.ಪಂ. ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.