ಬಂಟ್ವಾಳ, ಮೇ.15 (DaijiworldNews/HR): ಬೋಳಂತೂರು ನಿವಾಸಿಯೊಬ್ಬರು ಮೃತ ಪಟ್ಟಿರುವ ವಿಚಾರದ ಜತೆ ಗೀತಾ ಸಾಹಿತ್ಯ ಸಂಭ್ರಮ ಖ್ಯಾತಿಯ ಶಿಕ್ಷಕ ವಿಠಲ್ ನಾಯಕ್ ಅವರ ಪೋಟೊವನ್ನು ಹಾಕಿ ವಾಟ್ಸಾಪ್ಗಳಲ್ಲಿ ವೈರಲ್ ಮಾಡಿದ್ದು, ಈ ಕುರಿತು ವಿಠಲ್ ನಾಯಕ್ ಅವರು ವೀಡಿಯೋ ಮಾಡಿ ತಾನು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೋಳಂತೂರು ನಿವಾಸಿ ವಿಠಲ್ದಾಸ್(60) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದರು.
ವಿಠಲ್ದಾಸ್ ಸಾವಿನ ಸುದ್ದಿಯ ಜತೆಗೆ ವಿಠಲ್ ನಾಯಕ್ ಅವರ ಪೋಟೋ ಹರಿದಾಡುತ್ತಿತ್ತು. ಕಲ್ಲಡ್ಕ ನಿವಾಸಿ ಶಿಕ್ಷಕ ವಿಠಲ್ ನಾಯಕ್ ಅವರು ಗೀತಾ ಸಾಹಿತ್ಯ ಸಂಭ್ರಮದ ಮೂಲಕ ಖ್ಯಾತಿ ಗಳಿಸಿದ್ದು, ಬೋಳಂತೂರು ಶಾಲೆಯಲ್ಲಿ ಶಿಕ್ಷಕರಾಗಿದ್ದು, ಸಾಕಷ್ಟು ಅಭಿಮಾನಿಗಳನ್ನೂ ಹೊಂದಿದ್ದಾರೆ. ಹೀಗಾಗಿ ಈ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು.
ಇನ್ನು ವಿಠಲ್ ನಾಯಕ್ ಅವರೇ ಸ್ವತಃ, ತಾನು ಆರೋಗ್ಯವಾಗಿದ್ದು, ಯಾರೂ ಕೂಡ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ವೀಡಿಯೋ ಮಾಡಿ ವಾಟ್ಸಾಪ್ಗಳಲ್ಲಿ ಹರಿಯ ಬಿಟ್ಟಿದ್ದಾರೆ.
ನಿಮ್ಮೆಲ್ಲರ ಶುಭ ಆಶೀರ್ವಾದದಿಂದ ತಾನು ಮನೆಯಲ್ಲಿ ಆರೋಗ್ಯವಾಗಿದ್ದೇನೆ, ನೀವು ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಮನೆಯಲ್ಲಿ ಆರೋಗ್ಯವಾಗಿರಿ ಎಂದು ಸ್ಪಷ್ಟನೆ ನೀಡಿದ್ದಾರೆ.