ಉಡುಪಿ, ಮೇ 13 (DaijiworldNews/MB) : ರಾಷ್ಟ್ರೀಯ ಹೆದ್ದಾರಿ 169 ಎ ಅಗಲೀಕರಣ ಮಾಡಲಾಗುತ್ತಿದ್ದು ಪರ್ಕಳ ಗ್ರಾಮದಲ್ಲಿ ಹೆದ್ದಾರಿ ಅಗಲೀಕರಣದಿಂದಾಗಿ ಮನೆ ಕಳೆದುಕೊಂಡ ಕುಟುಂಬವೊಂದು ಈಗ ಬೇರೆ ದಾರಿಯಿಲ್ಲದೆ ಶಿಥಿಲಾವಸ್ಥೆಯಲ್ಲಿರುವ ಶೆಡ್ನಲ್ಲಿ ವಾಸಿಸುತ್ತಿದೆ.
ತಮ್ಮ ಮನೆ ಕಳೆದುಕೊಂಡ ಬಳಿಕ ವಾಸಿಸಲು ಬೇರೆ ಸ್ಥಳವಿಲ್ಲದ ಕಾರಣ ಶಂಕರಣ್ಣ (74), ಪ್ರಫುಲ್ಲಾ ಶೆಟ್ಟಿಗಾರ್ (65) ಮತ್ತು ಪ್ರಮೀಳಾ ಶೆಟ್ಟಿಗಾರ್ (50) ಕುಟುಂಬವು ಈಗ ಶೆಡ್ನಲ್ಲಿ ವಾಸಿಸುತ್ತಿದೆ. ಈ ಕುಟುಂಬವು ಹೆದ್ದಾರಿಯ ಪಕ್ಕದಲ್ಲಿದ್ದ ತಮ್ಮ ಭೂಮಿ ಮತ್ತು ಮನೆಯನ್ನು ಕಳೆದುಕೊಂಡಿದೆ. ಈ ಜಾಗವು ಕೂಡು ಕುಟುಂಬಕ್ಕೆ ಸೇರಿದ ಜಾಗವಾದ ಕಾರಣ ಪಾಲು ಮಾಡದ ವಿನಃ ಈ ಕುಟುಂಬಕ್ಕೆ ಯಾವುದೇ ಹಕ್ಕು ದೊರೆಯದು. ಈ ಹಿನ್ನೆಲೆ ಬೇರೆ ಯಾವುದೇ ಆಸರೆಯಿಲ್ಲದೆ ಈ ಕುಟುಂಬ ಸಣ್ಣ ಶೆಡ್ನಲ್ಲಿ ವಾಸಿಸುತ್ತಿದೆ.
ಮಳೆ ಬಂದರೆ ಕುಟುಂಬವು ಸಂಬಂಧಿಕರ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇದೆ. ಹಿರಿಯ ಸಹೋದರರಾದ ಶಂಕರಣ್ಣ ಮನೆಯ ಮುಂಭಾಗದಲ್ಲಿರುವ ಪ್ರೆಸ್ ಒಂದರಲ್ಲಿ ಬುಕ್ ಬೈಂಡಿಂಗ್ ಕಾರ್ಯ ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ಈಗ ರಸ್ತೆ ಅಗಲೀಕರಣದಿಂದಾಗಿ ಆ ಪ್ರೆಸ್ ಕೂಡಾ ಸ್ಥಳಾಂತರವಾಗಿದ್ದು ಈ ಹಿನ್ನೆಲೆ ಶಂಕರಣ್ಣನವರು ಕೆಲಸ ಕಳೆದುಕೊಂಡಿದ್ದಾರೆ.
ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿನ ಪರಿಹಾರವನ್ನು ಕುಟುಂಬಕ್ಕೆ ಸರ್ಕಾರದಿಂದ ದೊರೆತಿಲ್ಲ. ಈಗ ಕೊರೊನಾ ಲಾಕ್ಡೌನ್ ಕೂಡಾ ಇರುವ ಕಾರಣ ಈ ಮೂರು ಜೀವಗಳು ಜೀವನ ಹೇಗೆ ಸಾಗಿಸುವುದು ಎಂದು ದಿಕ್ಕು ತೋಚದೆ ಚಿಂತಿತರಾಗಿದ್ದಾರೆ. ಅಧಿಕಾರಿಗಳು ತಮ್ಮ ಪ್ರಶ್ನೆಗಳಿಗೆ ಅಹಂಕಾರದಿಂದ ಸ್ಪಂದಿಸುತ್ತಿದ್ದಾರೆ. ಈ ವಿಸ್ತರಣೆ ಕಾರ್ಯಕ್ಕೆ ತಡೆಯಾಜ್ಞೆ ಇದೆ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.
ಆಡಳಿತವು ತರಾತುರಿಯಲ್ಲಿ ಮನೆಗಳನ್ನು ಕೆಡವಿ, ಬಳಿಕ ಸಮಸ್ಯೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಜಿಲ್ಲಾಡಳಿತವನ್ನು ದೂಷಿಸಿರುವ ಪ್ರಫುಲ್ಲಾ ಶೆಟ್ಟಿಗಾರ್ ಅವರು ತಮ್ಮ ಈಗಿನ ಸ್ಥಿತಿಯ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ಸ್ವಂತ ಭೂಮಿಯಲ್ಲಿ ಮನೆ ನಿರ್ಮಿಸಲು, ಪುರಸಭೆಯ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಅಗತ್ಯವಿದೆ. ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆ ಈಗ ಏನನ್ನೂ ಮಾಡಲು ಈ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ತಮಗೆ ಒಂದು ಮನೆಯನ್ನು ನಿರ್ಮಿಸಲು ಬೇಕಾದ ಪರಿಹಾರವನ್ನು ನೀಡಿ ಎಂದು ಸರ್ಕಾರದ ಬಳಿ ಈ ಕುಟುಂಬವು ಮನವಿ ಮಾಡಿದೆ.
ಸಮಾಜ ಸೇವಕ ಗಣೇಶರಾಜ್ ಸರಳಬೆಟ್ಟು ಕೂಡಾ ಈ ಕುಟುಂಬಕ್ಕೆ ಸಹಾಯ ನೀಡುವುದು ಜಿಲ್ಲಾಡಳಿತದ ಕರ್ತವ್ಯ ಎಂದು ಹೇಳಿದ್ದಾರೆ.