ಬಂಟ್ವಾಳ, ಮೇ 13 (DaijiworldNews/MS): ಕೋವಿಡ್ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಯರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆಯಾ ಪಂಚಾಯತ್ ಗಳು ವಾಹನದ ವ್ಯವಸ್ಥೆ ಕಲ್ಪಿಸ ಬೇಕೆಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೂಚಿಸಿದರು.
ಅವರು ಗೋಳ್ತಮಜಲು ಗ್ರಾಮಪಂಚಾಯತ್ ನಲ್ಲಿ ಮೇ 12 ರ ಗುರುವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗವನ್ನು ಕೋವಿಡ್ ಮುಕ್ತ ಗೊಳಿಸಿದಲ್ಲಿ ಕೊರೋನಾ ನಿಯಂತ್ರಿಸಲು ಸಾಧ್ಯವಿದೆ. ಆ ಕಾರಣಕ್ಕಾಗಿಯೇ ನಿರಂತರವಾಗಿ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು ನಡೆಸಲಾಗುತ್ತಿದೆ. ಜನರು ತಮ್ಮ ಜಾಗರೂಕತೆಯನ್ನು ತಾವೇ ಮಾಡಿಕೊಳ್ಳಬೇಕು ಎಂದರು. ಗೋಳ್ತಮಜಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ 59 ಒಟ್ಟು ಪ್ರಕರಣಗಳ ಪೈಕಿ 25 ಸಕ್ರೀಯ ಫಾಸಿಟಿವ್ ಪ್ರಕರಣಗಳಿದ್ದು ಎಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಮಾಹಿತಿ ನೀಡಿ, ಎಲ್ಲರೂ ಕಡ್ಡಾಯವಾಗಿ ನೋಂದಾವಣಿ ಮಾಡಿಸಿಕೊಳ್ಳಬೇಕು, ಬಳಿಕ ಅದೇ ಪೋರ್ಟಲ್ ನಲ್ಲಿ ಸ್ಲಾಟ್ ಗಳಲ್ಲಿ ಲಸಿಕೆ ಪಡೆಯುವ ದಿನಾಂಕ ಹಾಗೂ ಪ್ರಾ. ಆ. ಕೇಂದ್ರವನ್ನು ಗುರುತು ಮಾಡಿದಲ್ಲಿ ಲಭ್ಯತೆಗೆ ಅನುಗುಣವಾಗಿ ಲಸಿಕೆ ನೀಡಲಾಗುತ್ತದೆ. ಪ್ರಸ್ತುತ ಲಸಿಕೆ ಅಲಭ್ಯತೆಗೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದರು.
ತಾ.ಪಂ.ಇ.ಒ.ರಾಜಣ್ಣ ಮಾತನಾಡಿ, ಹೊರಜಿಲ್ಲೆ, ಹೊರ ರಾಜ್ಯದಿಂದ ಬಂದವರ ಬಗ್ಗೆ ನಿಗಾವಹಿಸಿ, ಕ್ವಾರಂಟೈನ್ ಗೆ ಒಳಪಡಿಸುವ ಕಾರ್ಯ ಟಾಸ್ಕ್ ಫೋರ್ಸ್ ಮೂಲಕ ಆಗಬೇಕಿದೆ ಎಂದರು.
ಗೋಳ್ತಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಅಭಿಷೇಕ್ ಎನ್, ಉಪಾಧ್ಯಕ್ಷೆ ಲಕ್ಮೀ ವಿ.ಪ್ರಭು, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇ.ಒ.ರಾಜಣ್ಣ, ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಕಂದಾಯನಿರೀಕ್ಷಕ ರಾಮಕಾಟಿಪಳ್ಳ, ಪಿ.ಡಿ.ಒ.ವಿಜಯಶಂಕರ್ ಆಳ್ವ, ಗ್ರಾಮ ಕರಣಿಕ ಜನಾರ್ಧನ, ಶಾಸಕರ ವಾರ್ ರೂಮ್ ಪ್ರಮುಖರಾದ ದೇವಪ್ಪ ಪೂಜಾರಿ, ವಜ್ರನಾಥ ಕಲ್ಲಡ್ಕ, ರಮನಾಥ ರಾಯಿ, ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.