ಮಂಗಳೂರು, ಮೇ 13 (DaijiworldNews/MB) : ಕೊರೊನಾ ಸೋಂಕಿನಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರ್ಮಿಕರು, ಸಮಾಜದ ದುರ್ಬಲ ವರ್ಗದವರಿಗೆ ಇಂದಿರಾ ಕ್ಯಾಂಟೀನ್ಗಳ ಮೂಲಕ ಆಹಾರವನ್ನು ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ನಗರ ಮತ್ತು ಹೊರವಲಯದಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಮೇ 12 ರ ಬುಧವಾರದವರೆಗೂ ತೆರೆದಿಲ್ಲ.
ಲಾಕ್ಡೌನ್ ಘೋಷಣೆಯ ನಂತರ ಉರ್ವಾಸ್ಟೋರ್, ಲೇಡಿಗೋಷನ್, ಪಂಪ್ವೆಲ್, ಕಾವೂರು, ಸುರತ್ಕಲ್ ಹಾಗೂ ತೊಕೊಟ್ಟಿನಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಮುಚ್ಚಲಾಗಿದೆ.
ಕಳೆದ ಲಾಕ್ಡೌನ್ ಸಮಯದಲ್ಲಿ, ನಗರ ಪಾಲಿಕೆಯು ಇಂದಿರಾ ಕ್ಯಾಂಟೀನ್ನಿಂದ ಸುಮಾರು 9,000 ಆಹಾರ ಪಾರ್ಸೆಲ್ಗಳನ್ನು ಸುಮಾರು ಹತ್ತು ದಿನಗಳವರೆಗೆ ಜನರಿಗೆ ವಿತರಿಸಿದೆ. ಆದರೆ ಆ ಬಿಲ್ ಅನ್ನು ಇಲ್ಲಿಯವರೆಗೆ ಪಾವತಿಸಿಲ್ಲ. ಇಂದಿರಾ ಕ್ಯಾಂಟೀನ್ಗಳಿಗೆ ಸರ್ಕಾರ ನೀಡಬೇಕಾದ ಮಾಸಿಕ ಬಿಲ್ ಮೊತ್ತವನ್ನು ಕಳೆದ ಕೆಲವು ತಿಂಗಳುಗಳಿಂದ ನೀಡಿಲ್ಲ. ಆದ್ದರಿಂದ, ಈ ಕ್ಯಾಂಟೀನ್ಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಕ್ಯಾಂಟೀನ್ ಅನ್ನು ಟೆಂಡರ್ನಲ್ಲಿ ತೆಗೆದುಕೊಂಡವರು ಹೇಳಿದ್ದಾರೆ.
ಕ್ಯಾಂಟೀನ್ಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದರ ಜೊತೆಗೆ, ಕ್ಯಾಂಟೀನ್ ಕಾರ್ಮಿಕರ ಸುರಕ್ಷತೆಯನ್ನು ಖಾತರಿಪಡಿಸುವುದು ಮುಖ್ಯ. ಸುಮಾರು 50 ಕಾರ್ಮಿಕರು ವಿವಿಧ ಸ್ಥಳಗಳಿಂದ ಕ್ಯಾಂಟೀನ್ಗೆ ಬಂದು ಕಾರ್ಯನಿರ್ವಹಿಸಬೇಕಾಗುತ್ತದೆ. ಅವರನ್ನು ಕ್ಯಾಂಟೀನ್ಗೆ ಕರೆತರುವುದು ಮತ್ತು ವಾಪಾಸ್ ಬಿಡುವುದು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ವಿಷಯಗಳನ್ನು ನಗರ ಪಾಲಿಕೆಯ ಅಧಿಕಾರಿಗಳಿಗೆ ವಿವರಿಸಿದ್ದೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಇಲ್ಲಿನ ನಗರ ಪಾಲಿಕೆಯ ಉಪ ಆಯುಕ್ತ ಸಂತೋಷ್ ಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ಮೇ 13 ರಿಂದ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಪಾಲಿಕೆಯ ಮಿತಿಯಲ್ಲಿರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ಮತ್ತು ಉಪಹಾರ ಲಭ್ಯವಾಗಲಿದೆ. ಕ್ಯಾಂಟೀನ್ ಆರಂಭಿಸುವ ಬಗ್ಗೆ ವ್ಯವಸ್ಥಾಪಕರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.