ಉಡುಪಿ, ಮೇ 13 (DaijiworldNews/MB) : ದೇಶವನ್ನೇ ತಲ್ಲಣಗೊಳಿಸಿದ ರೂಪಾಂತರಿ ಕೊರೊನಾ ಸಮಾಜದ ಎಲ್ಲಾ ವರ್ಗವನ್ನು ಕಾಡಲಾರಂಭಿಸಿದೆ. ಸಾರ್ವಜನಿಕ ಜೀವನದಿಂದ, ಹೊರಗುಳಿದಿರುವ ತೃತೀಯ ಲಿಂಗಿಗಳ ಬದುಕು ತೀರ ದುಸ್ತರವಾಗಿದೆ. ಇವರನ್ನು ನೋಡೋ ದೃಷ್ಠಿಯೇ ಬೇರೆ. ಅವರು ಸಾರ್ವಜನಿಕವಾಗಿ ಓಡಾಡುವಾಗ ವಾಸ್ತವದ ಮಾತಿಗಿಂತ ಅಪಹಾಸ್ಯದ ನುಡಿಗಳೇ ಹೆಚ್ಚು. ತೃತೀಯ ಲಿಂಗಿಗಳ ಪೈಕಿ ಕೆಲವರು ಭಿಕ್ಷೆ ಬೇಡಿ ಬದುಕು ಕಟ್ಟಿಕೊಂಡರೆ ಇನ್ನು ಕೆಲವರು ಅನಿವಾರ್ಯವಾಗಿ ಅಡ್ಡ ದಾರಿ ಹಿಡಿದು ಬದುಕಿದ್ದಾರೆ. ಅದು ಒಂದು ರೀತಿಯ ವಿಚಿತ್ರ ನೋವಿನ ಬದುಕು. ಅಂತಹ ವರ್ಗ ಕೊರೊನಾ ಎರಡನೇ ಅಲೆಯಿಂದ ಸಂಪೂರ್ಣ ಕಂಗೆಟ್ಟಿದೆ. ಇಂತಹವರಿಗೆ ಸಹಾಯ ಮಾಡಲು ಮುಂದೆ ಬರೋ ಜನ ಬಹಳ ಕಡಿಮೆ.
ಸದಾ ಸಮಾಜದ ದೃಷ್ಟಿಯಿಂದ ಭಿನ್ನ ವರ್ಗ ಎಂದು ಗುರುತಿಸಿಕೊಂಡು ಅತ್ತ ಮುಖ್ಯವಾಹಿನಿಗೂ ಬರಲಾಗದೆ ಇದ್ದಂತೆಯೂ ಇರಲಾರದೆ ಸಂಕಟಪಡುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಊಟಕ್ಕೂ ತತ್ವಾರ ಬಂದಾಗ ಅವರಿಗೆ ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಸಹಾಯ ಹಸ್ತ ಚಾಚಿದ್ದಾರೆ.
ಕಳೆದ ಲಾಕ್ಡೌನ್ನಲ್ಲಿ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಕಿಟ್ಟ್ ನೀಡಿ ಸಹಕರಿಸಿದವು. ಸಹಾಯಧನಗಳು ಬಂದವು ಅದೆಷ್ಟೋ ಜನ ಊಟ ನೀಡಿ ಮಾನವೀಯತೆ ಮೆರೆದವು. ಅಂತಹ ಜನರ ಮಧ್ಯೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಇಂದಿಗೂ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ತೃತೀಯ ಲಿಂಗಿಗಳ ಪರಿಸ್ಥಿತಿ ಕಂಡು ವಿಶು ಶೆಟ್ಟಿ ಅಹಾರ ಧಾನ್ಯಗಳ ಕಿಟ್ ನೀಡಿ ಆಸರೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಅಧಿಕ ಸಂಖ್ಯೆಯ ತೃತೀಯ ಲಿಂಗಿಗಳಿದ್ದಾರೆ ಅವರಲ್ಲಿ ಅನೇಕರು ಬೇರೆ ಪ್ರದೇಶದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಸರಕಾರ ಕೆಲವು ಅನುದಾನದ ಘೋಷಣೆ ಮಾಡಿತ್ತು. ಜಿಲ್ಲಾಡಳಿತ ಕೆಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೂ ಅದು ಕೆಲವೇ ದಿನಗಳಿಗೆ ಸೀಮಿತವಾಗಿ ತೃತೀಯ ಲಿಂಗಿಗಳಿಗೆ ಆಸರೆ ಇಲ್ಲದಂತಾಗಿತ್ತು
"ನಮಗೆ ಲಾಕ್ಡೌನ್ನಿಂದ ತುಂಬಾ ತೊಂದರೆ ಆಗಿತ್ತು. ಮನೆ ಬಾಡಿಗೆ ಮತ್ತು ಊಟಕ್ಕೂ ಹಣ ಇರಲಿಲ್ಲ. ಆಗ ನಾವು ವಿಶು ಶೆಟ್ಟಿ ಅವರಿಗೆ ನಮ್ಮ ಸಮಸ್ಯೆ ಅನ್ನು ಹೇಳಿದಾಗ ಅವರು ನಮಗೆ ಕಿಟ್ ವ್ಯವಸ್ಥೆ ಮಾಡ್ದಿದಾರೆ. ಇದರಿಂದ ನಮಗೆ ತುಂಬಾ ಸಹಾಯ ಆಗಿದೆ" ಎನ್ನುತ್ತಾರೆ ಮಂಗಳಮುಖಿ ಲಾವಣ್ಯ ಅವರು.
"ಮಂಗಳಮುಖಿಯರು ಉಪವಾಸ ಕುಳಿತುಕೊಳ್ಳಬಾರದು ಎಂಬ ಉದ್ದೇಶದಿಂದ ಇವತ್ತು ಸುಮಾರು 10 ಸಾವಿರ ಮೌಲ್ಯದ ದಿನಸಿ ಸಾಮಗ್ರಿ ಅನ್ನು ನೀಡಿದ್ದೇನೆ. ಕೊರೊನಾ ಲಾಕ್ಡೌನ್ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಮುಲಭೂತ ಸೌಕರ್ಯ ವನ್ನು ಕೊಡುವ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು ಕೂಡ ಸಮಾಜದ ಅಸಹಾಯಕರಿಗೆ ಸಹಾಯ ಮಾಡಬೇಕು'' ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಬಾರಿ ಪ್ರತಿ ವರ್ಗದ ಜನ ಅದೆಷ್ಟೋ ಕಷ್ಟ ಪಟ್ಟು ದಿನಕಳೆದರು. ಈಗ ಎರಡನೇ ಬಾರಿ ಕೊರೊನಾ ವಕ್ಕರಿಸಿ ಮರ್ಮಾಘಾತ ನೀಡಿದೆ. ಜನ ನಾಳೆಯ ದಿನಗಳ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದ ತೃತೀಯ ಲಿಂಗಿಗಳು ದಿಕ್ಕು ತೋಚದೆ ಕಂಗಾಲಾಗಿದ್ದು ಅವರಿಗೆ ಭದ್ರತೆ ದೊರೆಯಲಿ ಎಂಬುದೇ ನಮ್ಮ ಆಶಯ.