ಕಾಸರಗೋಡು,ಮೇ 13 (DaijiworldNews/MS): ಕೋವಿಡ್-19 ಚಿಕಿತ್ಸೆಗಾಗಿ ಕಾಸರಗೋಡು ಜಿಲ್ಲೆಗೆ ಪ್ರತಿದಿನ ಹೆಚ್ಚುವರಿ ಅಗತ್ಯವಿರುವ 370 ಮೆಡಿಕಲ್ ಸಿಲಿಂಡರ್ ಗಳನ್ನು ತುರ್ತಾಗಿ ಖರೀದಿಸಲು ಜಿಲ್ಲಾ ದುರಂತ ನಿವಾರಣಾ ಪ್ರಾಧಿಕಾರ ಸಭೆ ನಿರ್ಧರಿಸಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದರ ಹೊಣೆಯನ್ನು ಜಿಲ್ಲಾ ವೈದ್ಯಾಧಿಕಾರಿಗೆ ನೀಡಲಾಗಿದೆ.
ಪ್ರತಿದಿನ 300 ಸಿಲಿಂಡರ್ ಮೆಡಿಕಲ್ ಆಕ್ಸಿಜನ್ ಕಣ್ಣೂರಿನ ಬಲ್ಕೋ ಸಂಸ್ಥೆಯಿಂದ ತರಿಸಲು ನಿರ್ಧರಿಸಲಾಗಿದ್ದು ವಿವಿಧ ಆಸ್ಪತ್ರೆಗಳಲ್ಲಿ ಸದ್ಯ ಇರುವ 370 ಆಕ್ಸಿಜನ್ ಸಿಲಿಂಡರ್ ಗಳನ್ನು ಬಳಸುತ್ತಿರುವ ಸಂದರ್ಭ 370 ಸಿಲಿಂಡರ್ ಗಳನ್ನು ರೀಫಿಲ್ ನಡೆಸಿ ಕಾಯ್ದಿರಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ಅಗತ್ಯದ ಸಿಲಿಂಡರ್ ಗಳನ್ನು ತುರ್ತಾಗಿ ಖರೀದಿಸಲಾಗುವುದು. ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಆಕ್ಸಿಜನ್ ಲೆವೆಲ್ ಸತತ ತಪಾಸಣೆ ನಡೆಸುವ ನಿಟ್ಟಿನಲ್ಲಿ ತುರ್ತಾಗಿ 2 ಸಾವಿರ ಪಲ್ಸ್ ಆಕ್ಸಿಮೀಟರ್ ಖರೀದಿಸಲು ಜಿಲ್ಲಾ ವೈದ್ಯಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ಜಿಲ್ಲಾ ಪಂಚಾಯತ್ ನಿಧಿ ಒದಗಿಸಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ಸಜ್ಜುಗೊಳಿಸದೇ ಇರುವ ಖಾಸಗಿ ಆಸ್ಪತ್ರೆಗಳ ಎಲ್ಲ ಸೌಲಭ್ಯಗಳನ್ನೂ ಸರಕಾರ ವಹಿಸಿಕೊಳ್ಳಲಿದೆ ಎಂದು ಸಭೆ ತಿಳಿಸಿದೆ. ಕಾಸರಗೋಡಿನ ಪ್ರಮುಖ ಆಸ್ಪತ್ರೆಯೊಂದನ್ನು ಈ ನಿಟ್ಟಿನಲ್ಲಿ ವಹಿಸಿಕೊಳ್ಳಲು ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಪಂಚಾಯತ್ ಮಟ್ಟದಲ್ಲಿ ಡೊಮಿಸಿಲರಿ ಕೇರ್ ಸೆಂಟರ್(ಡಿ.ಸಿ.ಸಿ.) ಗಳನ್ನು ಆರಂಭಿಸಲಾಗುವುದು. ಇದನ್ನು ಆಯಾ ಸ್ಥಳೀಯಾಡಳಿತೆ ಸಂಸ್ಥೆಗಳೇ ಸಜ್ಜುಗೊಳಿಸಬೇಕು. ಇದಕ್ಕಿರುವ ಸಹಾಯಗಳನ್ನು ಸ್ಥಳೀಯಾಡಳಿತೆ ಸಂಸ್ಥೆಗಳು ಸಂಘ-ಸಂಸ್ಥೆಗಳಿಂದ, ವ್ಯಕ್ತಿಗಳಿಂದ ಪಡೆಯಬಹುದು. ದೇಣಿಗೆ ಪಡೆದು ಯಾ ಸ್ವಂತ ನಿಧಿ ಬಳಸಿ ಕಟ್ಟಡ ಸಔಲಭ್ಯವಿಲ್ಲದೆಡೆ ತಾತ್ಕಾಲಿಕ ಸೌಲಭ್ಯ ಏರ್ಪಡಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಅತಿ ಕಡಿಮೆ ಅವಧಿಯಲ್ಲಿ ಕೊರೋನಾ ಸೋಂಕು ಹರಡುತ್ತಿದ್ದು, ಮನೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಪರ್ಕ ಪಡೆಯುವ ಇತರರಿಗೂ ಪಾಸಿಟಿವ್ ಆಗುತ್ತಿದೆ . ಹೀಗಾಗಿ ಮನೆಯ ಎಲ್ಲ ಸದಸ್ಯರೂ ಕಡ್ಡಾಯವಾಗಿ 14 ದಿನಗಳ ರೂಂ ಕ್ವಾರೆಂಟೈನ್ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು . ವಾರ್ಡ್ ಮಟ್ಟದ ಜನಜಾಗೃತಿ ಸಮಿತಿ ಯಾ ಆರ್.ಆರ್.ಟಿ. ಇವರ ಮನೆಗಳಿಗೆ ಅಗತ್ಯದ ಸಾಮಾಗ್ರಿಗಳನ್ನು ತಲಪಿಸಬೇಕು ಎಂದು ಸಭೆ ತಿಳಿಸಿದೆ.