ಮಂಗಳೂರು, ಮೇ 13 (DaijiworldNews/MB) : ಕಳೆದ ವರ್ಷದಂತೆ ಈ ಬಾರಿಯೂ ಲಾಕ್ಡೌನ್ ಹಿನ್ನೆಲೆ ಇಂದು ಪವಿತ್ರ ಈದ್ ಹಬ್ಬದ ದಿನವಾಗಿದ್ದರೂ ಕೂಡಾ ಮಂಗಳೂರಿನ ಹಲವು ಪ್ರದೇಶಗಳಲ್ಲಿ ನಿಶಬ್ಧವಾಗಿದೆ. ನಗರದಲ್ಲಿ ಅಗತ್ಯ ವಸ್ತುಗಳ ಸಾಗಾಟದ ವಾಹನ ಮಾತ್ರ ಸಂಚಾರ ಮಾಡುತ್ತಿದೆ.
ಈ ವರ್ಷವೂ ಕೂಡಾ ಕರಾವಳಿ ಜಿಲ್ಲೆಗಳಲ್ಲಿ ಮುಸ್ಲಿಂ ಭಾಂದವರು ಈದ್ ಹಬ್ಬವನ್ನು ತಮ್ಮ ಮನೆಗಳಲ್ಲೇ ಆಚರಣೆ ಮಾಡುತ್ತಿದ್ದಾರೆ. ಈಗಾಗಲೇ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಗುರುವಾರ ಈದ್ ಹಬ್ಬವನ್ನು ಸರಳವಾಗಿ ಆಚರಿಸಲು ಸೂಚಿಸಿದ್ದಾರೆ. ಹಾಗೆಯೇ ಇಂದು ಮಸೀದಿಗಳಲ್ಲಿ ಕೇವಲ ಧರ್ಮಗುರುಗಳು ಮಾತ್ರ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಿದ್ದಾರೆ.
ಪ್ರತಿ ವರ್ಷವೂ ಹಬ್ಬದ ಅಂಗವಾಗಿ ನಮಾಝ್ ಸಲ್ಲಿಸಲೆಂದು ನಗರದ ಭಾವುಟಗುಡ್ಡದಲ್ಲಿನ ಈದ್ಗಾ ಮಸೀದಿ, ಪಂಪ್ವೆಲ್ ಮಸೀದಿ, ಜುಮ್ಮಾ ಮಸೀದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸೇರುತ್ತಿದ್ದರು. ಆದರೆ ಕಳೆದ ವರ್ಷದಂತೆ ಈ ವರ್ಷವೂ ಲಾಕ್ಡೌನ್ ನಿರ್ಬಂಧ ಇರುವ ಕಾರಣದಿಂದಾಗಿ ಮಸೀದಿ ಹಾಗೂ ಹಲವು ಪ್ರದೇಶಗಳು ನಿರ್ಜನವಾಗಿದೆ.
ಎರಡನೇ ಕೊರೊನಾ ಅಲೆ ಹಿನ್ನೆಲೆ ರಾಜ್ಯದಾದ್ಯಂತ ಪ್ರಸ್ತುತ ಲಾಕ್ಡೌನ್ ಜಾರಿಯಲ್ಲಿದ್ದು ಯಾವುದೇ ಧಾರ್ಮಿಕ, ರಾಜಕೀಯ ಸಭೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕರು ಮಂದಿರ, ಮಸೀದಿ, ಚರ್ಚುಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಲಾಗಿದೆ.