ಬಂಟ್ವಾಳ, ಮೇ 13 (DaijiworldNews/MS): ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಕೋವಿಡ್ ನಿಯಂತ್ರಣದ ಮುಖ್ಯ ಹೆಜ್ಜೆ, ಇದರಲ್ಲೇ ಎಡವುದು ಸರಿಯಲ್ಲ, ಇದರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಅಮ್ಮುಂಜೆ ಗ್ರಾಮಪಂಚಾಯತ್ ನಲ್ಲಿ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 35 ಫಾಸಿಟಿವ್ ಪ್ರಕರಣಗಳ ಪೈಕಿ 27 ಸಕ್ರಿಯ ಪ್ರಕರಣಗಳಿದ್ದು 24 ಮಂದಿ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ, ನಾಲ್ವರು ಆಸ್ಪತ್ರೆಯಲ್ಲಿದ್ದಾರೆ. 35 ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿ 35 ಪ್ರಾಥಮಿಕ ಸಂಪರ್ಕಿತರನ್ನು ಮಾತ್ರ ಪತ್ತೆ ಹಚ್ಚಿರುವುದು ಕನಿಷ್ಠ ಪ್ರಗತಿ ಎಂದ ಅವರು, ಚುರುಕಿನಿಂದ ಕೆಲಸ ನಿರ್ವಹಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು.
ಲಸಿಕೆ ನೀಡಿಕೆ ವಿಚಾರದಲ್ಲೂ ನಿರ್ಲಕ್ಯ ಬೇಡ ಎಂದು ಸೂಚಿಸಿದ ಶಾಸಕ ರಾಜೇಶ್ ನಾಯ್ಕ್, ಪ್ರತಿಯೋರ್ವರೂ ಕೂಡ ತಮ್ಮ ತಮ್ಮ ಜವಬ್ದಾರಿ ಅರಿತು ಕೆಲಸ ಮಾಡುವಂತೆ ತಿಳಿಸಿದರು.ಟಾಸ್ಕ್ ಫೋರ್ಸ್ ಸಮಿತಿಯ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿದ ಶಾಸಕರು, ಹೊಸದಾಗಿ ಲಸಿಕೆ ಪಡೆದುಕೊಳ್ಳುವವರು, ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕೆಂದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಮಾಹಿತಿ ನೀಡಿ, ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಪ್ರಥಮ ಲಸಿಕೆ ಪಡೆದವರಿಗೆ ಸಮಯಕ್ಕೆ ಸರಿಯಾಗಿ ಎರಡನೇ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ, ಯಾರೂ ಆತಂಕ ಪಡಬೇಕಿಲ್ಲ ಎಂದರು. ತಾ.ಪಂ.ಇ.ಒ.ರಾಜಣ್ಣ ಮಾತನಾಡಿ, ಟಾಸ್ಕ್ ಫೋರ್ಸ್ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು, ಇದಕ್ಕೆ ಪೂರಕವಾಗಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಗ್ರಾಮದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ನಿಗಾವಹಿಸುವಂತೆ ಸೂಚಿಸಿದರು.
ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ವಾಮನ ಆಚಾರ್ಯ, ಉಪಾಧ್ಯಕ್ಷೆ ಪ್ರಮೀಳಾ, ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾ.ಪಂ.ಇ.ಒ.ರಾಜಣ್ಣ, ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ, ಅಮ್ಮುಂಜೆ ಗ್ರಾ.ಪಂ.ಪಿ.ಡಿ.ಒ ಶಿವಲಾಲ್ ಚೌಹ್ಹನ್, ಗ್ರಾಮ ಕರಣಿಕ ಪ್ರಶಾಂತ್ , ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ರಮನಾಥ ರಾಯಿ ಮತ್ತು ಟಾಸ್ಕ್ ಫೋರ್ಸ್ ಸಮಿತಿ, ಅಧಿಕಾರಿಗಳು ಉಪಸ್ಥಿತರಿದ್ದರು.