ಕಾರ್ಕಳ, ಮೇ 12 (DaijiworldNews/MB) : ''ಕೊರೊನಾ ಲಸಿಕೆ ನೀಡುವುದನ್ನು ಕೇಂದ್ರ ಸರಕಾರ ಒಂದು ರಾಷ್ಟ್ರೀಯ ಆಂದೋಲನವನ್ನಾಗಿ ರೂಪಿಸಿ ದೇಶದ ಜನರಿಗೆ ಉಚಿತ ಮತ್ತು ಕಡ್ಡಾಯಗೊಳಿಸಬೇಕು. ಇದು ಇಂದಿನ ಅನಿವಾರ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಹಿಂದೆ ದೇಶದಲ್ಲಿ ಕಂಡು ಬಂದ ಸಿಡುಬು, ಮಲೇರಿಯಾ, ಕೊಲೇರಾ, ದಢಾರದಂತಹ ಮಹಾಮಾರಿ ರೋಗಗಳನ್ನು ನಿಯಂತ್ರಿಸುವಲ್ಲಿ ಅಂದಿನ ಸರಕಾರಗಳು ತೆಗೆದುಕೊಂಡ ನಿರ್ಣಯಗಳನ್ನು ಆದರ್ಶವಾಗಿರಿಸಿಕೊಂಡು ಕಾರ್ಯ ನಿರ್ವಹಿಸಬೇಕು'' ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದೆ.
''ಕೊರೊನಾ ನಿರ್ವಹಣೆ ಮತ್ತು ಲಸಿಕೆ ಸರಬರಾಜಿನಲ್ಲಿ ಸರಕಾರ ಎಡವಿದ್ದು ತನ್ನ ರಾಜಕೀಯದ ಅಸ್ತಿತ್ವಕ್ಕಾಗಿ ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಈಗಾಗಲೇ 2ನೇ ಲಸಿಕೆಗಾಗಿಯೇ ಜನರು ಪರದಾಡುತ್ತಿದ್ದಾರೆ. ಆದಾಗ್ಯೂ ಮೇ 1ರಿಂದ 18 ವರ್ಷಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಹೇಳಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಓನ್ಲೈನ್ ನೊಂದಣಿ ಲಸಿಕಾ ಕೊರತೆಯನ್ನು ಮರೆಮಾಚುವ ಒಂದು ವ್ಯವಸ್ಥಿತ ನಾಟಕವಾಗಿದ್ದು, ಕೇಂದ್ರ ಸರಕಾರ ತನ್ನ ಆರ್ಥಿಕ ಲೆಕ್ಕಾಚಾರದಿಂದ ಹೊರ ಬಂದು ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
''ಕಳೆದ ಫೆಬ್ರವರಿಯಲ್ಲಿ 50ಕೋಟಿ ಜನರಿಗೆ ಉಚಿತ ಲಸಿಕೆಗಾಗಿ 35ಸಾವಿರ ಕೋಟಿ ರೂ. ಮೀಸಲಿಟ್ಟಿದೆ ಎಂದು ಕೇಂದ್ರ ಸರಕಾರ ಹೇಳಿತ್ತಾದರೂ ವಾಸ್ತವದಲ್ಲಿ ಸಂಬಂಧ ಪಟ್ಟ ಸಿರಮ್ ಇನ್ಸ್ಟಿಟ್ಯೂಟ್ ಅಫ್ ಇಂಡಿಯಾದಿಂದ ಅದೇ ಮಾರ್ಚ್ ತಿಂಗಳಲ್ಲಿ ಪಡೆದದ್ದು ಕೇವಲ 2.10 ಕೋಟಿ ಡೋಸ್ ಮಾತ್ರ ಎನ್ನಲಾಗಿದೆ. ಕೊರೊನಾ ಉತ್ತುಂಗ ಸ್ಥಿತಿಗೆ ಹೋಗುತ್ತಿರುವುದನ್ನು ಮನಗಂಡ ಸರಕಾರ ಎಪ್ರಿಲ್ ತಿಂಗಳಲ್ಲಿ ಮತ್ತೆ 11 ಕೋಟಿ ಡೋಸಿಗೆ ಬೇಡಿಕೆ ಸಲ್ಲಿಸಿದೆ. ಈ ನಡುವೆ ಲಸಿಕೆಯನ್ನು ರಾಜ್ಯ ಸರಕಾರಗಳೇ ಪೂರೈಸಿಕೊಳ್ಳಬೇಕೆ ಅಥವಾ ಕೇಂದ್ರ ಸರಕಾರವೇ ಪೂರೈಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಇದು ಕೇಂದ್ರ ಸರಕಾರದ ಹೊಣೆಗಾರಿಕೆಯಾಗಿದೆ. ಆದರೆ ನಮ್ಮ ನಿಷ್ಕ್ರಿಯ ರಾಜ್ಯ ಸರಕಾರ ಇದನ್ನು ಪ್ರಶ್ನಿಸುವ ಧೈರ್ಯ ತೋರದೆ ಲಸಿಕೆಗಾಗಿ ಜನರನ್ನು ಬೀದಿಗೆ ಬೀಳಿಸಿದೆ'' ಎಂದು ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.