ಪುತ್ತೂರು, ಮೇ 12 (DaijiworldNews/MB) : ರಸ್ತೆ ಬದಿಯ ಬಿಕ್ಷುಕರೊಂದಿಗೆ ಕಾಲ ಕಳೆಯುತ್ತಿದ್ದ ವ್ಯಕ್ತಿಯೋರ್ವ ಕೊರೊನಾ ದೃಢವಾದ ಬಳಿಕ ನಾಪತ್ತೆಯಾಗಿದ್ದು ಮದ್ಯ ಕುಡಿದು ರಸ್ತೆ ಬದಿಯಲ್ಲಿ ಮಲಗಿದ್ದ ಆತನನ್ನು ಅಧಿಕಾರಿಗಳು ಕೂಡಲೇ ಸೋಂಕಿತನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿಗೆ ಗದಗ ಜಿಲ್ಲೆಯಿಂದ ಬಂದಿದ್ದ ವ್ಯಕ್ತಿಯೋರ್ವ ಸದಾ ಮಹಾಮಾಯಿ ದೇವಳ ರಸ್ತೆಯಲ್ಲಿ ಇನ್ನಿತರ ಕೆಲವು ಉತ್ತರ ಕರ್ನಾಟಕ ಮೂಲದ ವ್ಯಕ್ತಿಗಳೊಂದಿಗೆ ಇರುತ್ತಿದ್ದ. ಧಿಡೀರ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಸ್ವತಃ ಅವನೇ ಸರಕಾರಿ ಆಸ್ಪತ್ರೆಗೆ ಬಂದು ಕೊರೊನಾ ತಪಾಸಣೆ ಮಾಡಿಸಿಕೊಂಡಿದ್ದ. ಬಳಿಕ ಮೇ 11ರ ರಾತ್ರಿ ಆತನ ವರದಿ ಪಾಸಿಟಿವ್ ಎಂದು ತಿಳಿಯುತ್ತಿದ್ದಂತೆ ಆತ ನಾಪತ್ತೆಯಾಗಿದ್ದು ಈ ಬಗ್ಗೆ ಸರಕಾರಿ ಆಸ್ಪತ್ರೆಯಿಂದ ಪುತ್ತೂರು ನಗರಸಭೆಗೆ ಮಾಹಿತಿ ನೀಡಲಾಗಿತ್ತು.
ಆತನನ್ನು ಹುಡುಕಾಡಿದಾಗ ಎಲ್ಲೂ ಪತ್ತೆಯಾಗಿರಲಿಲ್ಲ. ಮೇ 12ರಂದು ಮಧ್ಯಾಹ್ನ ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಮತ್ತು ಸಿಬ್ಬಂದಿಗಳು ಇಲ್ಲಿನ ನೆಲ್ಲಿಕಟ್ಟೆ ಶಾಲೆಯಲ್ಲಿ ತೆರೆಯಲಾದ ಪಾಲನಾ ಕೇಂದ್ರದಲ್ಲಿರುವ ಲಾಕ್ಡೌನ್ ಸಂತ್ರಸ್ತರಿಗೆ ಮಧ್ಯಾಹ್ನದ ಆಹಾರ ನೀಡಲು ಹೋದ ಸಂದರ್ಭ ನಾಪತ್ತೆಯಾಗಿದ್ದ ಸೋಂಕಿತ ವ್ಯಕ್ತಿ ಮದ್ಯ ಸೇವಿಸಿ ಮಲಗಿರುವುದು ಪತ್ತೆಯಾಗಿದ್ದು ಕೂಡಲೇ ಜಾಗೃತರಾದ ಅಧಿಕಾರಿಗಳು ಆತನನ್ನು ಮರಳಿ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ಗಾಗಿ ಯತ್ನಿಸಿದ್ದಾರೆ.
ಆದರೆ ಆಂಬುಲೆನ್ಸ್ ಬರುವುದು ಸಾಕಷ್ಟು ಹೊತ್ತಾಗಿದ್ದು ಬಳಿಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಅವರ ಸೂಚನೆಯಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಲಾಗಿದೆ. ಆದರೆ ಆತನಿಗೆ ವಿಪರೀತ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆತನನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನು ತನಗೆ ಕೊರೊನಾ ಇದೆ ಎಂದು ತಿಳಿದು ಭಯ ಆಯ್ತು. ನನ್ನಲ್ಲಿ ಇದ್ದ ಮದ್ಯ ಸೇವಿಸಲು ಆಗುವುದಿಲ್ಲ ಎಂದು ತಿಳಿದು ಆಸ್ಪತ್ರೆಯಿಂದ ಓಡಿಹೋಗಿ ಚಿಣ್ಣರ ಪಾರ್ಕ್ನಲ್ಲಿ ರಾತ್ರಿ ಮದ್ಯ ಸೇವಿಸಿ ಅಲ್ಲಿಂದ ಬೆಳಿಗ್ಗೆ ನೆಲ್ಲಿಕಟ್ಟೆ ಪಾಲನ ಕೇಂದ್ರಕ್ಕೆ ಬಂದು ಮಲಗಿದ್ದೆ ಎಂದು ಆತ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಲಾಗಿದೆ.
ನನ್ನನ್ನು ಕೊರೊನಾ ಸೆಂಟರ್ಗೆ ದಾಖಲು ಮಾಡಿದರೆ ನಾನು ಅಲ್ಲಿಂದಲೂ ತಪ್ಪಿಸಿಕೊಂಡು ಹೋಗುತ್ತೇನೆ ಎಂದು ಆತ ನಗರಸಭಾ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ಆತ ಪಾಸಿಟಿವ್ ಎಂದು ತಿಳಿದ ಮೇಲೆಯೂ ಊರಿಡಿ ಸುತ್ತಾಡಿರುವ ಹಿನ್ನೆಲೆ ಆತನ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ.