ಉಡುಪಿ, ಮೇ 12 (DaijiworldNews/MS): "ಕೊರೊನಾ ಎರಡನೇ ಅಲೆಯಿಂದ ಜನ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಘುಪತಿ ಭಟ್ ರವರೆ ನಿಮ್ಮ ಮೇಲೆ ಕ್ಷೇತ್ರದ ಜನರು ಬಹಳಷ್ಟು ನಂಬಿಕೆ ಇಟ್ಟು ಗೆಲ್ಲಿಸಿರುತ್ತಾರೆ. ಆದರೆ ಉಡುಪಿಯಲ್ಲಿ ಆಸ್ಪತ್ರೆಗಳು ಈಗಾಗಲೇ ಕೋವಿಡ್ ರೋಗಿಗಳಿಂದ ತುಂಬಿ ತುಳುಕಿದ್ದು, ತೀವ್ರ ಅಸ್ವಸ್ಥ ಗೊಂಡವರಿಗೆ ವೆಂಟಿಲೇಟರ್ ಐಸಿಯು ದೊರೆಯುತ್ತಿಲ್ಲ. ನಿಮ್ಮ ಆಡಳಿತದಲ್ಲಿ ಜನರ ಪ್ರಾಣದ ಗತಿ ದೇವರೇ ಗತಿ ಎಂಬಂತೆ ಆಗಿದೆ"ಎಂದು ನಗರಸಭಾ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್ ದೂರಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು" ಜನರು ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಬಹಳಷ್ಟು ಭಯಭೀತರಾಗಿದ್ದು ಕೋರೋನಾ ಲಸಿಕೆ ಪಡೆಯಲು ಹಾತೊರೆಯುತಿದ್ದಾರೆ. ಆದರೆ ಲಸಿಕಾ ಕೇಂದ್ರದಲ್ಲಿ ಸರಿಯಾಗಿ ಲಸಿಕೆ ದೊರೆಯುತ್ತಿಲ್ಲ. 45ವರುಷ ಮೇಲ್ಪಟ್ಟವರು ಮೊದಲ ಡೋಸ್ ಪಡೆದಿದ್ದು ಅವರಿಗೆ ಎರಡನೇ ಡೋಸ್ ಪಡೆಯಲು ಸಾಧ್ಯವಾಗುತಿಲ್ಲ. ಇದರಲ್ಲಿ ಹೆಚ್ಚಿನವರು ಹಿರಿಯ ನಾಗರೀಕರಾಗಿದ್ದು ಹಲವು ಬಾರಿ ಲಸಿಕಾ ಕೇಂದ್ರಕ್ಕೆ ಬಂದು ಕಾದು ಕಾದು ಸುಸ್ತಾಗಿ ಹಿಂತಿರುಗಿರುತ್ತಾರೆ".
" ಮೊದಲು ಡೋಸ್ ಕೋವಾಕ್ಸಿನ್ ಪಡೆದವರಿಗೆ ಎರಡನೇ ಡೋಸ್ ಸಿಗುತ್ತಿಲ್ಲ. ಈವಾಗ ಕೇವಲ ಕೋವಿ ಶೀಲ್ಡ್ ದೊರೆಯುತ್ತಿದೆ. ಹಾಗು ಬಹಳಷ್ಟು ಜನರ ವ್ಯಾಕ್ಸಿನ್ ಪಡೆಯುವ ಅವಧಿಯು ಮುಗುಯುತ್ತಿದೆ. ಲಸಿಕೆ ಪಡೆಯಲು ಸಂಪೂರ್ಣ ಆನ್ಲೈನ್ ವ್ಯವಸ್ಥೆ ಇದ್ದು ಇದರಬಗ್ಗೆ ಜನರು ಪರದಾಡುವಂತೆ ಆಗಿದೆ. 18ರಿಂದ 44ವರ್ಷದವರಿಗು ವ್ಯಾಕ್ಸಿನೇಷನ್ ಆರಂಭ ವಾಗಿದ್ದು ಆನ್ಲೈನ್ ಬುಕ್ಕಿಂಗ್ ಬಹಳಷ್ಟು ಗೊಂದಲ ಇದೆ. ವೆಬ್ ಸೈಟ್ ನಲ್ಲಿ ದೊರಕುವ ಸಂದೇಶ ತೋರಿಸುವ ಮೊದಲೇ ವ್ಯಾಕ್ಸೀನ್ ಬುಕ್ ಆಗಿರುತ್ತದೆ. ವೆಬ್ ಸೈಟ್ ನಲ್ಲಿ ಸ್ಲಾಟ್ ಗಳು ಬುಕ್ ಎಂದು ತೋರಿಸಿದ್ದು ಅರೋಗ್ಯ ಸೇತು ಆಪ್ ನಲ್ಲಿ ಅವಲೆಬಲ್ ಎಂದು ತೋರಿಸುತ್ತಿದೆ .
ಲಸಿಕಾ ಕೇಂದ್ರದಲ್ಲಿ ಸಾಮಾನ್ಯ ಜನರು ಕ್ಯೂ ನಲ್ಲಿ ನಿಂತು ಟೋಕನ್ ತೆಗೆದುಕೊಂಡು ಕಾಯುತಿದ್ದರೂ ಪ್ರಭಾವಿ ವ್ಯಕ್ತಿಗಳು ಯಾವುದೇ ಟೋಕನ್ ಇಲ್ಲದೆ ರಾಜಕೀಯ ಪ್ರಭಾವ ಬಳಸಿ ವ್ಯಾಕ್ಸೀನ್ ಪಡೆಯುತ್ತಿದ್ದಾರೆ
ಒಟ್ಟಾರೆಯಾಗಿ ವ್ಯಾಕ್ಸಿನೇಷನ್ ಸಿಸ್ಟಮ್ ಗೊಂದಲದ ಗೂಡಾಗಿದ್ದು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ನಿಮಗೆ ಬಹಳಷ್ಟು ಜವಾಬ್ದಾರಿ ಇದ್ದು ತಾವು ತಕ್ಷಣ ತಮ್ಮ ಜವಾಬ್ದಾರಿಯನ್ನು ಅರಿತು ಹಡಿಲು ಭೂಮಿ ಯೋಜನೆಯನ್ನು ಸ್ವಲ್ಪ ಸಮಯ ಮುಂದೂಡಿ ಲಸಿಕಾ ಕೇಂದ್ರದತ್ತ ದೌಡಾಯಿಸಿ ಜನರ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕಾಗಿ ಎಂದು ಆಗ್ರಹಿಸಿದ್ದಾರೆ.