ಉಡುಪಿ, ಮೇ 12 (DaijiworldNews/MB) : ಕಷ್ಟ ಕಾಲದಲ್ಲಿ ನೆರವಿಗೆ ದಾವಿಸುವ ಆಟೋ ಚಾಲಕರು, ಕೋವಿಡ್ ಸಮಯದಲ್ಲೂ ತಮ್ಮ ವಿಶೇಷ ಸೇವೆಗೆ ಮುಂದಾಗಿದ್ದಾರೆ. ರೋಗಿಗಳು, ಹಿರಿಯ ನಾಗರಿಕರ ಉಚಿತ ತುರ್ತು ಸೇವೆಗಾಗಿ 37 ರಿಕ್ಷಾ ಚಾಲಕರ ತಂಡ ಉಡುಪಿಯಲ್ಲಿ ಸಿದ್ದವಾಗಿದ್ದು, ರಿಕ್ಷಾ ಚಾಲಕ ಸಮಾಜ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸದ್ಯ ಎಲ್ಲೆಡೆ ಕೊರೊನಾ ಸಂಕಷ್ಟ ಸಮಯ, ಎಲ್ಲರಿಗೂ ಒಂದಲ್ಲ ಒಂದು ತೊಂದರೆ ತಾಪತ್ರೆ, ಮನೆ ಮಂದಿಗೆ ಆರೋಗ್ಯ ಸರಿ ಇಲ್ಲ ಅಂದ್ರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಸವಾಲು, ಕೊರೊನಾ ಕ್ಲೋಸ್ ಡೌನ್ ಜಾರಿ ಇರುವ ಕಾರಣ ಬಹಳಷ್ಟು ಜನರಿಗೆ ಅಂಬುಲೆನ್ಸ್ ಮೊದಲಾದ ಅರೋಗ್ಯ ವಾಹನದ ಸೇವೆಗಳು ಸಿಗುತ್ತಿಲ್ಲ. ಇದಕ್ಕಾಗಿ ಉಡುಪಿಯ ಕೃಷ್ಣಮೂರ್ತಿ ಆಚಾರ್ಯ ಮತ್ತವರ ತಂಡ ಈ ಉಚಿತ ಸೇವಾ ಕಾರ್ಯವನ್ನು ಆರಂಭಿಸಿದೆ. ರೋಗಿಗಳು ಮತ್ತು ಹಿರಿಯ ನಾಗರಿಕರ ತುರ್ತು ಸೇವೆಗಾಗಿ ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 36 ರಿಕ್ಷಾ ಚಾಲಕರು ತಮ್ಮ ನಿಸ್ವಾರ್ಥ ಸೇವೆ ನೀಡಲು ಮುಂದೆ ಬಂದಿದ್ದಾರೆ.
"ಯಶೋದಾ ಆಟೋ ಯೂನಿಯನ್ನ ವತಿಯಿಂದ ನಾವು ಈ ವ್ಯವಸ್ಥೆಯನ್ನು ಪ್ರಾರಂಭ ಮಾಡಿದ್ದೇವೆ. ಆರೋಗ್ಯ ಸಂಬಂಧಿ ಕಷ್ಟಪಡುವವರಿಗೆ ಸೇವೆ ನೀಡಲು ನಾವು ಸದಾ ಸಿದ್ದ ಇರುತ್ತೇವೆ. ಉಡುಪಿ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ನಾವು ನಮ್ಮ ಕಾರ್ಯ ನಿರ್ವಹಿಸುತ್ತೇವೆ. ಸರಿಯಾದ ವ್ಯವಸ್ಥೆ ಇಲ್ಲದ ಸಂಧರ್ಭದಲ್ಲಿ ನಮಗೆ ಫೋನ್ ಮಾಡಿದರೆ ರೋಗಿಗಳನ್ನು ನಾವು ಆಸ್ಪತ್ರೆಗೆ ತಲುಪಿಸುವ ಕೆಲಸವನ್ನು ಮಾಡಲಿದ್ದೇವೆ. ಇದು ಉಚಿತ ಸೇವೆ ನಾವು ಇದರಲ್ಲಿ ಯಾವುದೇ ಪ್ರತಿಫಲಾಫೇಕ್ಷೆಯನ್ನು ಬಯಸುವುದಿಲ್ಲ" ಎಂದು ಧನ್ಯತಾ ಭಾವದಿಂದ ನುಡಿಯುತ್ತಾರೆ ರಿಕ್ಷಾ ಚಾಲಕ ಸುರೇಶ್.
ಸದ್ಯ 36 ರಿಕ್ಷಾ ಚಾಲಕರು ಈ ಉತ್ತಮ ಸೇವೆಗೆ ಮುಂದೆ ಬಂದಿದ್ದು, ದಿನದ 24 ಗಂಟೆಯೂ ಸೇವೆ ನೀಡಲು ಈ ರಿಕ್ಷಾ ಚಾಲಕರ ತಂಡ ಸಿದ್ಧವಾಗಿದೆ. ಆಟೋ ಚಾಲಕರ ಈ ಸಮಾಜ ಸೇವೆಗೆ ಜಿಲ್ಲಾಡಳಿತ ಕೂಡ ಬೆಂಬಲ ನೀಡಿದೆ. ಆಟೋ ಚಾಲಕರು ತಮ್ಮಗೆ ಕಷ್ಟ ಇದ್ರೂ ಜನರ ಕಷ್ಟದಲ್ಲಿ ಇದ್ದಾಗ ಜನರ ಸೇವೆ ಮಾಡುವುದು ಮುಖ್ಯ ಅಂತ ತಿಳಿದು ಈ ಪುಣ್ಯದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
"ಉಡುಪಿ ನಗರ ಭಾಗ ಸೇರಿದಂತೆ ಗ್ರಾಮಾಂತರದಲ್ಲಿ ಮಣಿಪುರ, ದೆಂದೂರುಕಟ್ಟೆ, ಕಡೆಕಾರು, ಅಂಬಲಪಾಡಿ, ಕಿದಿಯೂರು, ಈ ಭಾಗಗಳಲ್ಲಿ ಉಚಿತವಾಗಿ ಆರೋಗ್ಯ ಸೇವೆಯನ್ನು ಒದಗಿಸಲಿದ್ದೇವೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಈ ಸೇವೆ ನಡೆಯಲಿದೆ" ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಮೂರ್ತಿ ಆಚಾರ್ಯ ಇವರು.
ಇಷ್ಟು ಮಾತ್ರವಲ್ಲದೇ ರಿಕ್ಷಾ ಚಾಲಕರು ಕೂಡಾ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುತಿದ್ದಾರೆ. ಸೇವೆ ಸಲ್ಲಿಸುವ ಸಂಧರ್ಭದಲ್ಲಿ ಎಲ್ಲಾ ಚಾಲಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸನ್ನು ಧರಿಸುತಿದ್ದಾರೆ.
ಒಟ್ಟಿನಲ್ಲಿ ಮೊದಲೇ ದುಡಿಮೆ ಇಲ್ಲದೆ ಕೈ ಸುಟ್ಟುಕೊಂಡಿರುವ ರಿಕ್ಷಾ ಚಾಲಕರು ಇದೀಗ ತಾವಾಗಿಯೇ ಉಚಿತ ಸೇವೆಗೆ ಮುಂದೆ ಬಂದಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ, ಸೇವೆ ಪಡೆದವರು ಆಟೋ ಚಾಲಕರಿಗೆ ಭೇಷ್ ಅಂತಿದ್ದಾರೆ.