ಕಾಪು, ಮೇ 12 (DaijiworldNews/MS): ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬುವವರ ಮನೆಯ ಸಮೀಪದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ದನ ಕರುಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಕಾಪು ಬಂಧಿಸಿದ್ದಾರೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳನ್ನು ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ , ಮಹಮ್ಮದ್ ಅಜರುದ್ದೀನ್, ನವಾಜ್, ಮಹಮ್ಮದ್ ಹನೀಫ್ ಯಾನೆ ಆಸ್ಪಕ್ , ಮಹಮ್ಮದ್ ಇಸ್ಮಾಯಿಲ್, ಉಮ್ಮರಬ್ಬ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಪರಾರಿಯಾದವರನ್ನು ಇಸ್ಮಾಯಿಲ್ , ರಪೀಕ್ , ಅಬ್ಬು ಮಹಮ್ಮದ್ ಎಂದು ತಿಳಿದುಬಂದಿದೆ. ಈ ಸಂದರ್ಭ ನಾಲ್ಕು ಕರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ಬಂಧಿತರಿಂದ ನಾಲ್ಕು ಕರುಗಳು, 30 ಕೆ.ಜಿ. ಮಾಂಸ, ಕಸಾಯಿಖಾನೆಯಲ್ಲಿ ಉಪಯೋಗಿಸುತ್ತಿದ್ದ ಚೂರಿ ಹಾಗೂ ಇತರ ಸಲಕರಣೆಗಳು, ಪಿಕ್ ಅಪ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚೂರಿ
ಘಟನೆಯ ವಿವರ:
ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುನಿಟ್ಟಿನಲ್ಲಿಲಿ ರಾಜ್ಯ ಸರಕಾರ ಮತ್ತು ಉಡುಪಿ ಜಿಲ್ಲಾಡಳಿತವು ಲಾಕ್ಡೌನ್ ಘೋಷಿಸಿದ್ದು ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು, ಈ ಬಗ್ಗೆ ಮಂಗಳವಾರ ಬೆಳಗ್ಗೆ ಪೊಲೀಸ್ ರೌಂಡ್ಸ್ ನಲ್ಲಿ ಇರುವಾಗ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬುವವರ ಮನೆಯ ಸಮೀಪ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ದನಗಳನ್ನು ತಂದು ಕಡಿದು ಮಾಂಸ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದರು.ಕಾಪು ಎಸ್ಐ ರಾಘವೇಂದ್ರ ಸಿ. ಅವರಿಗೆ ದೊರಕಿದ ಖಚಿತ ಮಾಹಿತಿಯಂತೆ, ಸಿಬಂದಿಗಳ ಜೊತೆಗೂಡಿ ಪೊಲೀಸರು ಧಾಳಿ ನಡೆಸಲಾಗಿತ್ತು. ಪೊಲೀಸರು ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡುತ್ತಿದ್ದಾಗ ಮೂಳೂರು ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬವರ ಮನೆ ಹತ್ತಿರ ಪಿಕ್ಅಪ್ ವಾಹನವೊಂದನ್ನು ನಿಲ್ಲಿಸಿದ್ದು, ಮನೆಯ ಸಮೀಪ ನಾಲ್ಕು ಕರುಗಳನ್ನು ಕಟ್ಟಿ ಹಾಕಿದ್ದು ಅಲ್ಲದೇ ಅಲ್ಲೇ ಸಮೀಪದಲ್ಲಿ ಮಾಂಸವನ್ನು ತಯಾರಿ ಮಾಡುತ್ತಿದ್ದು ಪತ್ತೆಯಾಗಿತ್ತು.
ಈ ವೇಳೆ ಆರೋಪಿಗಳು ಪೊಲೀಸ್ ಜೀಪನ್ನು ನೋಡಿ ಪರಾರಿಯಾಗಲೆತ್ನಿಸಿದ್ದು, ಪೊಲೀಸರು ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಮತ್ತೆ ಮೂವರು ಪರಾರಿಯಾಗಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇಸ್ಮಾಯಿಲ್ನೊಂದಿಗೆ ಸೇರಿಕೊಂಡು ಆತನ ಸೂಚನೆಯಂತೆ ಮಜೂರು ಪರಿಸರದಿಂದ 5 ಬಿಡಾಡಿ ದನದ ಕರುಗಳನ್ನು ಪಿಕ್ ಅಪ್ ವಾಹನದಲ್ಲಿ ಕದ್ದು ತಂದು, ಅದರಲ್ಲಿ 1 ಕರುವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ 4,5,9,11, ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ 1964 , ಕಲಂ. 11(1)(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ -1960 ಹಾಗೂ ಮತ್ತು 269, 379 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ