ಮಂಗಳೂರು, ಮೇ 12 (DaijiworldNews/MS):ಅಂಗಡಿಯಲ್ಲಿದ್ದ ಮಹಿಳೆಯಲ್ಲಿ ನೀರು ಕೇಳಿ ಕಳ್ಳರಿಬ್ಬರು ನಗದು ದೋಚಿದ ಘಟನೆ ತೊಕ್ಕೊಟ್ಟು ಒಳಪೇಟೆಯ ಟಿ.ಸಿ ರೋಡ್ ನಲ್ಲಿ ಮೇ 12ರ ಬುಧವಾರ ಬೆಳಿಗ್ಗೆ ನಡೆದಿದೆ.
ಉಳ್ಳಾಲ ಪೊಲೀಸ್ ಠಾಣೆ
ಟಿ.ಸಿ ರೋಡಿನಲ್ಲಿರುವ ಅನುಸೂಯ ಎಂಬವರ ಅಂಗಡಿಯಿಂದ ನಗದು ಕಳವು ನಡೆದಿದೆ. ಇಂದು ಬೆಳಿಗ್ಗೆ ಬೈಕಿನಲ್ಲಿ ಬಂದಿದ್ದ ಆಗಂತುಕನೋರ್ವ ಅಂಗಡಿಯಲ್ಲಿ ಸಿಗರೇಟು ಕೇಳಿದ್ದನು. ಸಿಗರೇಟು ಪಡೆದು ಅಲ್ಲಿಯೇ ಸೇದಲು ಮುಂದಾದಾಗ ಅನುಸೂಯ ಅವರು ಅಲ್ಲಿ ಸೇದದಂತೆ ಸೂಚಿಸಿದ್ದರು. ಆ ಬಳಿಕ ಕುಡಿಯಲು ನೀರು ಕೇಳಿದ್ದಾನೆ. ಇದೇ ವೇಳೆ ಅವರು ಫ್ರಿಡ್ಜ್ ನಿಂದ ನೀರು ತೆಗೆಯುವಷ್ಟರಲ್ಲಿ ಅಂಗಡಿಯೊಳಗೆ ನುಗ್ಗಿದ ಕಳ್ಳ ಅಲ್ಲಿದ್ದ ಪರ್ಸನ್ನು ಎಳೆದೊಯ್ದು, ತೊಕ್ಕೊಟ್ಟು ಜಂಕ್ಷನ್ ಕಡೆಗೆ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಪರ್ಸಿನಲ್ಲಿದ್ದ ರೂ.35,000 ನಗದು ಕಳ್ಳ ಕಳವುಗೈದಿದ್ದಾನೆ.
ಅಂಗಡಿಗೆ ಸಾಮಗ್ರಿಗಳು ಬರುವ ಸಮಯವಾಗಿದ್ದರಿಂದ ಪರ್ಸಿನಲ್ಲಿ ನಗದನ್ನು ಇಟ್ಟಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳರ ಸುಳಿವು ಎದುರುಗಡೆ ಇರುವ ಖಾಸಗಿ ನರ್ಸಿಂಗ್ ಕಾಲೇಜಿನ ಸಿಸಿಟಿವಿಯಲ್ಲಿ ದಾಖಲೆಯಾಗಿರುವ ಸಾಧ್ಯತೆ ಇದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.