ಪುತ್ತೂರು, ಮೇ 11 (DaijiworldNews/SM): ಗ್ರಾಮ ಪಂಚಾಯತ್ ಸದಸ್ಯರು ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದು, ತಮ್ಮ ಕುಟುಂಬದ ನಿರ್ವಹಣೆಗೆ ಕಷ್ಟಪಡುತ್ತಾರೆ. ಆದರೆ, ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಸದಸ್ಯೆ ದೀಪಿಕಾ ಆದರ್ಶ ಮೆರೆದಿದ್ದಾರೆ. ಮುಂಡೂರಿನ ಕೆಮ್ಮಿಂಜೆ ವಾರ್ಡ್ ನ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಉಚಿತವಾಗಿ ದಿನಸಿ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ದೇಶವೇ ತತ್ತರಿಸಿದೆ. ಸೋಂಕು ನಿವಾರಿಸಲು ಹಾಗೂ ಜನರ ಸುರಕ್ಷತೆಗಾಗಿ ಸರಕಾರದ ಹಲವಾರು ನೀತಿ ನಿಯಮಗಳನ್ನು ಜಾರಿಗೆ ತಂದಿದೆ. ಅನೇಕ ಜನರು ಸರಕಾರ ಜಾರಿಗೆ ತಂದಿರುವ ಲಾಕ್ ಡೌನ್ ನಿಂದಾಗಿ ಉದ್ಯೋಗವಿಲ್ಲದೆ, ಮನೆಯಲ್ಲೇ ಉಳಿಯುವಂತಾಗಿದೆ. ಹಲವಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅಂತಹವರಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾ.ಪಂ. ಸದಸ್ಯೆ ದೀಪಿಕಾ ಅವರು ತಮ್ಮ ಕೈಲಾದ ಸಹಾಯವನ್ನು ತನ್ನ ವಾರ್ಡ್ ನಲ್ಲಿರುವ ಬಡ ಕುಟುಂಬಗಳಿಗೆ ಮಾಡುವ ಮೂಲಕ ಆದರ್ಶರಾಗಿದ್ದಾರೆ.
ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಮತ್ತೆ ಯಾರಾದರೂ ಸಂಕಷ್ಟದಲ್ಲಿದ್ದು, ಅಗತ್ಯ ವಸ್ತುಗಳಿಗಾಗಿ ಪರದಾಟ ನಡೆಸುತ್ತಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.