ಕಾಸರಗೋಡು, ಮೇ 11 (DaijiworldNews/SM): ಅಕ್ರಮ ಮರಳು ಸಾಗಾಟ ತಡೆದ ಮೂವರನ್ನು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ ಎಂದು ಆರೋಪಿಸಿ ನಾಗರಿಕರು ರಸ್ತೆ ತಡೆ ನಡೆಸಿದ ಘಟನೆ ರಾಜ್ಯ ಹೆದ್ದಾರಿಯ ಬೇಕಲದ ತೃಕ್ಕನ್ನಾಡ್ ನಲ್ಲಿ ಮಂಗಳವಾರ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿದರೂ ಮೀನುಗಾರರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರನ್ನು ಬಿಡುಗಡೆಗೊಳಿಸಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಕಳೆದ ಎರಡು ದಿನಗಳಿಂದ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ಟಿಪ್ಪರ್ ಲಾರಿಯನ್ನು ಮೀನುಗಾರರು ತಡೆದಿದ್ದರು. ಲಾರಿಯನ್ನು ತಡೆದ ಮೂವರನ್ನು ಬೇಕಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಮರಳು ಮಾಫಿಯಾಕ್ಕೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ ಮೀನುಗಾರರು ಹಾಗೂ ನಾಗರಿಕರು ರಸ್ತೆ ತಡೆ ನಡೆಸಿದ್ದರು. ಕೋವಿಡ್ ಮನನದಂಡ ಉಲ್ಲಂಘಿಸಿ ಪ್ರತಿಭಟನೆ ನಡೆಸದಂತೆ ಪೊಲೀಸರು ಮನವಿ ಮಾಡಿದರೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದ್ದು ಕೊನೆಗೂ ಮೂವರನ್ನು ಬಿಡುಗಡೆ ಮಾಡಲು ಮುಂದಾಗುವುದರೊಂದಿಗೆ ಸಮಸ್ಯೆ ಬಗೆಹರಿಯಿತು. ಕೋವಿಡ್ ಮಾನದಂಡ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ನೂರಕ್ಕೂ ಅಧಿಕ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.