ಮಂಗಳೂರು, ಮೇ 11 (DaijiworldNews/MB) : ಕುವೈಟ್ನಿಂದ ಐಎನ್ಎಸ್ ಕೊಚ್ಚಿ ಮತ್ತು ಐಎನ್ಎಸ್ ತಬಾರ್ ಎರಡು ನೌಕಾ ಹಡಗುಗಳು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಮತ್ತು ಆಮ್ಲಜನಕ ಕಾನ್ಸನ್ಟ್ರೇಟರ್ಗಳನ್ನು ಹೊತ್ತು ನವಮಂಗಳೂರು ಬಂದರಿಗೆ ಆಗಮಿಸಿದೆ.
ನೌಕಾಪಡೆಯ ಹಡಗು ಐಎನ್ಎಸ್ ಕೊಚ್ಚಿ ತಲಾ 20 ಮೆ.ಟನ್ನ ಮೂರು ಲಿಕ್ವಿಡ್ ಆಕ್ಸಿಜನ್ ತುಂಬಿದ ಕಂಟೇನರ್ಗಳನ್ನು, ತಲಾ ಒಂದು ಟನ್ನ 40 ಆಕ್ಸಿಜನ್ ಸಿಲಿಂಡರ್ಗಳು ಹಾಗೂ ತಲಾ 10 ಲೀಟರ್ನ ಎರಡು ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಕುವೈಟ್ನಿಂದ ಹೊತ್ತು ತಂದಿದೆ.
ಹಾಗೆಯೇ ಐಎನ್ಎಸ್ ತಬಾರ್ ಹಡಗು, ತಲಾ 20 ಮೆ.ಟನ್ ಲಿಕ್ವಿಡ್ ಆಕ್ಸಿಜನ್ ತುಂಬಿದ ಎರಡು ಕಂಟೇನರ್ಗಳು ಹಾಗೂ ತಲಾ ಒಂದು ಟನ್ನ 30 ಆಮ್ಲಜನಕ ಸಿಲಿಂಡರ್ಗಳನ್ನು ಹೊತ್ತು ಕುವೈಟ್ನಿಂದ ಬಂದಿದೆ.
ಕುವೈಟ್ ಸರ್ಕಾರವು ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ದಾನ ಮಾಡಿದ ವೈದ್ಯಕೀಯ ಸಹಾಯದ ಎರಡನೆಯ ಭಾಗವಾಗಿ ಈ ವೈದ್ಯಕೀಯ ಆಮ್ಲಜನಕ ಮತ್ತು ಸಾಂದ್ರಕಗಳು ನವಮಂಗಳೂರು ಬಂದರಿಗೆ ಬಂದು ತಲುಪಿದೆ. ಈ ಎರಡು ಹಡಗುಗಳು ಕುವೈಟ್ನ ಶುವಾಯ್ಕ್ ಬಂದರಿನಿಂದ ಮೇ 6 ರಂದು ಹೊರಟ್ಟಿತ್ತು.
ಈ ಎರಡು ಹಡಗುಗಳನ್ನು ಒಳಗೊಂಡಂತೆ ಇಲ್ಲಿಯವರೆಗೆ 4 ನೌಕಾ ಹಡಗುಗಳ ಮೂಲಕ ವೈದ್ಯಕೀಯ ಆಮ್ಲಜನಕ ಮತ್ತು ಉಪಕರಣಗಳು ನವಮಂಗಳೂರು ಬಂದರಿಗೆ ಬಂದಿದೆ.
ಈ ಸಂದರ್ಭ ಎನ್ಎಂಪಿಟಿ ಅಧ್ಯಕ್ಷರಾದ ಡಾ.ಎ.ವಿ.ರಮಣ, ಉಪಾಧ್ಯಕ್ಷರು ಕೆ.ಜಿ.ನಾಥ್, ಹಾಗೆಯೇ ಬಂದರು, ನೌಕಾಪಡೆ, ಕೋಸ್ಟ್ ಗಾರ್ಡ್, ಕಸ್ಟಮ್ಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಮೇಲ್ವಿಚಾರಣೆ ನಡೆಸಿದರು.