ಕುಂದಾಪುರ, ಮೇ.11 (DaijiworldNews/PY): ಇಲ್ಲಿನ ಹಳೆ ಬಸ್ ನಿಲ್ದಾಣದ ಸಮೀಪವಿರುವ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಮಂಗಳವಾರ ಬೆಳಗ್ಗೆ ವಿಪರೀತ ನೂಕು ನುಗ್ಗಲು ಸೃಷ್ಟಿಯಾಗಿದ್ದು, ಈ ವೇಳೆ ಫುಡ್ ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ಸ್ಥಳಕ್ಕೆ ಆಗಮಿಸಿ ಅರ್ಧ ಗಂಟೆಯಲ್ಲಿ ಗ್ರಾಹಕರಿಗೆ ಪಡಿತರ ವಿತರಿಸಿದ್ದಾರೆ.
ತಿಂಗಳ ಪಡಿತರ ಖರೀದಿಗೆ ಜನ ಬೆಳಿಗ್ಗೆ 6 ಗಂಟೆಗೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು. ನಿಗದಿತ ಸಮಯಕ್ಕೆ ನ್ಯಾಯಬೆಲೆ ಅಂಗಡಿ ತೆರೆಯುತ್ತಿದ್ದಂತೆ ನೂಕು ನುಗ್ಗಲು ಇನ್ನಷ್ಟು ಜಾಸ್ತಿಯಾಯಿತು. ಕಡಿಮೆ ಸಿಬ್ಬಂದಿಗಳು ಇರುವುದರಿಂದ ಗ್ರಾಹಕರನ್ನು ನಿಯಂತ್ರಿಸುವುದು ಅಲ್ಲಿನ ನಿರ್ವಾಹಕರಿಗೆ ಕಷ್ಟವಾಗಿತ್ತು. ಸಾಮಾಜಿಕ ಅಂತರ, ಕೊರೊನಾ ನಿಯಮಾವಳಿಗಳು ಉಲ್ಲಂಘನೆಯಾಗುವ ಸ್ಥಿತಿ ನಿರ್ಮಾಣವಾಯಿತು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಫುಡ್ ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ಸ್ಥಳಕ್ಕೆ ಆಗಮಿಸಿ ಸ್ವತಃ ತಾವೇ ಪಡಿತರವನ್ನು ತೂಕ ಮಾಡಿ ಗ್ರಾಹಕರಿಗೆ ನೀಡಲು ಮುಂದಾದರು. ಚುರುಕಾಗಿ ಕಾರ್ಯನಿರ್ವಹಿಸಿದ ಸುರೇಶ ಕುಮಾರ್ ಅರ್ಧ ಗಂಟೆಯಲ್ಲಿ ಎಲ್ಲರಿಗೂ ಪಡಿತರ ವಿತರಣೆ ಮಾಡಿದರು. ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಅಖಾಡಕ್ಕೆ ಇಳಿದ ಸುರೇಶ ಕುಮಾರ್ ಅವರ ಕಾರ್ಯವೈಖರಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.