ಮಂಗಳೂರು, ಮೇ 11(DaijiworldNews/MS): ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಸೂಕ್ತ ಫಲಾನುಭವಿಗಳಿಗೆ ಲಸಿಕೆ ನೀಡುವ ಬದಲು ಶಾಸಕ ವೇದವ್ಯಾಸ್ ಕಾಮತ್ ನಿಯಮ ಮುರಿದು ರಾಜಕೀಯ ಹಸ್ತಕ್ಷೇಪ ಮಾಡಿ ತಮ್ಮ ಹಿಂಬಾಲಕರಿಗೆ ಲಸಿಕೆ ನೀಡುವಂತೆ ಒತ್ತಡ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಮೇ.11ರ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, " ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆ ವೆನ್ ಲಾಕ್ ನಲ್ಲಿ ಕೋವಿಡ್ ತಡೆಗಾಗಿ ನೀಡಲಾಗುತ್ತಿರುವ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪೂರೈಕೆಯಲ್ಲಿ ಕೊರತೆ ಇದೆ ಈ ಸಂದರ್ಭ ದಲ್ಲಿ ಮೊದಲ ಡೋಸ್ ಲಸಿಕೆ ನೀಡಿದವರಿಗೆ ಆದ್ಯತೆಯ ಮೇರೆಗೆ ಎರಡನೆ ಡೋಸನ್ನು ನಿಗದಿತ ದಿನಗಳ ಒಳಗೆ ನೀಡಬೇಕಾಗಿದೆ ಆದರೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಈ ನಿಯಮ ಮುರಿದು ತಮಗೆ ಬೇಕಾದವರಿಗೆ ಮೊದಲು ನೀಡುವ ರಾಜಕೀಯ ಹಸ್ತಕ್ಷೇಪ ಮಾಡಿದ್ದಾರೆ ಇದರಿಂದ ಮೊದಲು ಲಸಿಕೆ ಪಡೆದವರಿಗೆ ಅನ್ಯಾಯವಾಗುತ್ತಿದೆ. ಆದುದರಿಂದ ಈ ರೀತಿಯ ಹಸ್ತಕ್ಷೇಪವನ್ನು ತಕ್ಷಣ ನಿಲ್ಲಿಸಬೇಕು" ಎಂದು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಜಿಲ್ಲೆಗೆ ಬಂದಿರುವು ದು ಕೇವಲ 350 ಡೋಸ್ ಮಾತ್ರ.ಇದನ್ನು ಮೊದಲು ಲಸಿಕೆ ಪಡೆದವರಿಗೆ ಆದ್ಯತೆ ಯ ಮೇಲೆ ನೀಡಬೇಕಿತ್ತು.ಆದರೆ ಶಾಸಕರು ಈ ನಿಯಮ ಉಲ್ಲಂಘಿಸಿ ತಮ್ಮ ಹಿಂಬಾಲಕರಿಗೆ ನೀಡುವ ಮೂಲಕ ಲಸಿಕೆ ನೀಡುವ ಕಾರ್ಯಕ್ರಮ ದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜೆ.ಆರ್.ಲೋಬೋ ಆರೋಪಿಸಿದ್ದಾರೆ.
ಶಾಸಕರು ಈ ರೀತಿ ಹಸ್ತಕ್ಷೇಪ ಮಾಡುವ ಬದಲು ಎಲ್ಲರಿಗೂ ಲಸಿಕೆಯನ್ನು ತರಿಸಿ ನೀಡುವ ತಾಕತ್ತನ್ನು ಪ್ರದರ್ಶಿಸಲಿ. ಈ ರೀತಿಯ ಹಸ್ತಕ್ಷೇಪ ನಡೆದರೆ ಇದನ್ನು ತಡೆಯಲು ಕಾಂಗ್ರೆಸ್ ಮಧ್ಯೆ ಪ್ರವೇಶಿಸ್ಬೇಕಾದೀತು ಎಂದು ಜೆ.ಆರ್. ಲೋಬೋ ಎಚ್ಚರಿಕೆ ನೀಡಿದ್ದಾರೆ.
ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಯಲ್ಲಿ ಆಗಿರುವ ಅಭಿವೃದ್ಧಿ ಯಲ್ಲಿ ಕಾಂಗ್ರೆಸ್ ಶಾಸಕರ, ಸಚಿವರ ದೊಡ್ಡ ಕೊಡುಗೆ ಅಪಾರ ಇದೆ. ಅದರ ಪರಿಣಾಮವಾಗಿ ಸುಮಾರು ನಾಲ್ಕು ಜಿಲ್ಲೆ ಹಾಗೂ ಎರಡು ರಾಜ್ಯಗಳ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಆದರೆ ಈ ಎಲ್ಲಾ ಕೊಡುಗೆಗಳನ್ನು ಮರೆತು ಹಾಲಿ ಶಾಸಕ ವೇದವ್ಯಾಸ ಕಾಮತ್ ಕಾಂಗ್ರೆಸ್ ಕೊಡುಗೆ ಏನು ಇಲ್ಲ ಎನ್ನುವ ಹೇಳಿಕೆ ನೀಡಿರುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ಅವರು ಶಾಸಕರಾದ ಬಳಿಕ ಯಾವ ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ ಅವರಿಂದ ಜಿಲ್ಲಾ ಆಸ್ಪತ್ರೆ ಗೆ ಇದುವರೆಗೆ ಯಾವುದೇ ಗಮನಾರ್ಹ ಕೊಡುಗೆ ದೊರೆತಿಲ್ಲ ಎಂದು ಹೇಳಿದ್ದಾರೆ.
ವೆನ್ಲಾಕ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿ ಯೋಜನೆ, 15ಕೋಟಿ ರೂ ವೆಚ್ಚದ ಸೂಪರ್ ಸ್ಪೆಷಾಲಿಟಿ ಬ್ಲಾಕ್, 50 ಬೆಡ್ಗಳ ಆಯುಷ್ ಬಿಲ್ಡಿಂಗ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಕಾಂಗ್ರೆಸ್ ಕೊಡುಗೆ. ನವೀಕರಣಗೊಂಡ ಬ್ಲಾಕ್ ಗಳು ಕಾಂಗ್ರೆಸ್ ಪಕ್ಷದ ಸಚಿವರ, ಶಾಸಕರ ಕಾಲದಲ್ಲಿ ಆಗಿದೆ. ಹಿಂದಿನ ಶಾಸಕ ಯೋಗೀಶ್ ಭಟ್ ಈ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸಿದ್ದಾರೆ.ಆದರೆ ಈಗಿನ ಶಾಸಕ ವೇದವ್ಯಾಸ ಕಾಮತ್ ಶಾಸಕರಾಗುವವರೆಗೆ ಈ ಕಡೆ ತಲೆ ಹಾಕಿಲ್ಲ. ಶಾಸಕರಾದ ಬಳಿಕವೂ ಯಾವುದೇ ಅಭಿವೃದ್ಧಿ ಯೋಜನೆಯ ಬಗ್ಗೆ ಮುತುವರ್ಜಿ ವಹಿಸಿಲ್ಲ. ಈ ಬಗ್ಗೆ ನಾವು ಅವರ ಸವಾಲನ್ನು ಸ್ವೀಕರಿಸಲು ಸಿದ್ಧ ಎಂದು ಜೆ.ಆರ್.ಲೋಬೋ ತಿಳಿಸಿದ್ದಾರೆ.
ಮನಪಾ ವಿಪಕ್ಷ ನಾಯಕ ವಿನಯರಾಜ್,ಹಾಗೂ ಇತರ ಕಾಂಗ್ರೆಸ್ ಪದಾಧಿಕಾರಿಗಳಾದ ಸುಭೋದ್ ಆಳ್ವ, ಮುಹಮ್ಮದ್ ಕುಂಜತ್ತಬೈಲ್,ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ದಾಸ್,ಸತೇಶ್ ಶೆಟ್ಟಿ, ಟಿ.ಕೆ.ಸುಧೀರ್, ಅಶ್ರಫ್, ಸಂಶುದ್ಧೀನ್, ರಮಾನಂದ,ಯೋಗೀಶ್,ನೀರಜ್ ಪಾಲ್ ಮೊದಲಾವರು ಉಪಸ್ಥಿತರಿದ್ದರು.