ಉಡುಪಿ, ಮೇ.11 (DaijiworldNews/HR): ಶಾಸಕ ರಘುಪತಿ ಭಟ್ ಅವರು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ, ಐಸಿಯು, ವೆಂಟಿಲೇಟರ್ ಸೌಲಭ್ಯದ ಅವಲೋಕನ, ಸಮರ್ಪಕ ವ್ಯವಸ್ಥೆಯ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಉಡುಪಿಯಲ್ಲಿ ಕೊರೊನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಹೆಚ್ಚಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹಾಗೂ ಪ್ರಸ್ತುತ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ, ಐಸಿಯು, ವೆಂಟಿಲೇಟರ್ ಕುರಿತು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಅವಲೋಕನ ನಡೆಸಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದರೆ ಹೆಚ್ಚಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಭೆ ನಡೆಸಿ ಚರ್ಚಿಸಲಾಯಿತು.
ಪ್ರಸ್ತುತ ಕೆಎಂಸಿ ಮಣಿಪಾಲದಲ್ಲಿ 410 ಆಕ್ಸಿಜನ್ ಬೆಡ್, 100 ಜನರಲ್ ಬೆಡ್ ಸೇರಿದಂತೆ 510 ಬೆಡ್ ವ್ಯವಸ್ಥೆ ಮಾಡಲಾಗಿದ್ದು, 60 ಐಸಿಯು ಕೊರೊನಾಗೆ ಮಾರ್ಪಡಿಸಿದ್ದಾರೆ. 40 ಎಚ್ಡಿಯು ಬೆಡ್ ಇದೆ. 40 ವೆಂಟಿಲೇಟರ್ ತಯಾರು ಮಾಡಿದ್ದಾರೆ. ಇನ್ನೂ 12 ವೆಂಟಿಲೇಟರ್ ತಯಾರು ಮಾಡುವ ಭರವಸೆ ನೀಡಿದ್ದಾರೆ. ಸಮಸ್ಯೆ ಕೈಮೀರುವ ಹಂತಕ್ಕೆ ಬಂದರೆ ಇನ್ನೂ ಹೆಚ್ಚಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಕೆಎಂಸಿ ಮೆಡಿಕಲ್ ಸೂಪರಿಡೆಂಟ್ ಡಾ.ಅವಿನಾಶ್ ಶೆಟ್ಟಿ, ಚೀಫ್ ಆಪರೇಟಿಂಗ್ ಆಫೀಸರ್ ಡಾ.ಮುತ್ತಣ್ಣ, ಡಾ.ರಾಹುಲ್, ಆಯುಷ್ಮಾನ್ (ಕೆಬಿಆರ್ ಕೆ) ನೋಡಲ್ ಆಫೀಸರ್ ಸುರೇಂದ್ರ ಚಿಂಬಾಲ್ಕರ್, ಡಾ.ಸಚ್ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.