ಮಂಗಳೂರು, ಮೇ 11 (DaijiworldNews/MB) : ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ಸೇರಿದಂತೆ ಯಾರೂ ಮುಂದೆ ಬಾರದ ಸಂದರ್ಭದಲ್ಲಿ ಕೆಲವೊಂದು ಮುಸ್ಲಿಂ ಸ್ವಯಂ ಸೇವಾ ಸಂಘಟನೆಗಳು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳ ಅಂತ್ಯ ಸಂಸ್ಕಾರ ಹಿಂದೂ ಸಂಪ್ರದಾಯದಂತೆ ನಡೆಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಸಂಘಟನೆಗಳು, ಹಿಂದೂ ಸಂಪ್ರದಾಯದಂತೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಿದ ಬಳಿಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಶರಣ್ ಪಂಪ್ವೆಲ್, ''ಹಿಂದೂಗಳ ಅಂತ್ಯಸಂಸ್ಕಾರ ಮಾಡಲು ಮುಸಲ್ಮಾನರ ಅಗತ್ಯವಿಲ್ಲ. ಕೊರೊನಾದಿಂದ ಮೃತಪಟ್ಟ ಹಿಂದೂಗಳ ಮೃತದೇಹವನ್ನು ಹಿಂದೂಗಳಿಗೆ ಮಾತ್ರ ನೀಡಬೇಕು. ಹಿಂದೂ ಸಂಘಟನೆಯ ಕಾರ್ಯಕರ್ತರು ಗೌರವಯುತ ಅಂತ್ಯಸಂಸ್ಕಾರ ನಡೆಸಲು ಸಿದ್ದರಿದ್ದಾರೆ'' ಎಂದು ಹೇಳಿದ್ದರು.
ಶರಣ್ ಪಂಪ್ವೆಲ್ ಅವರು ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಹಲವು ರಾಜಕೀಯ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಮೊದಲಾದವರು ಶರಣ್ ಪಂಪ್ವೆಲ್ ಅಂತ್ಯಸಂಸ್ಕಾರದಲ್ಲೂ ಕೋಮು ಲೇಪ ಹಚ್ಚುತ್ತಿದ್ದಾರೆ ಎಂದು ಖಂಡಿಸಿದ್ದರು.
ಈ ಬಗ್ಗೆ ಮಾತನಾಡಿರುವ ಮಿಥುನ್ ರೈ, ''ಧರ್ಮಭೇದವಿಲ್ಲದೆ ಶವಸಂಸ್ಕಾರ ಮಾಡುವಾಗ, ಶರಣ್ ಪಂಪ್ವೆಲ್ ಧರ್ಮದ ವಿಷ ಬೀಜ ಬಿತ್ತುತ್ತಿದ್ದಾರೆ. ನಾವು ಈಗ ಕೊರೊನಾ ವಿರುದ್ದ ಜಾತಿ-ಮತ-ಭೇದ ಮರೆತು ಸಂಘಟಿತರಾಗಿ ಹೋರಾಟ ಮಾಡಬೇಕು. ಆದರೆ ಈ ಸಂದರ್ಭದಲ್ಲೂ ಶರಣ್ ಪಂಪ್ವೆಲ್ ಅವರು ಕೋಮುವಾದದ ವಿಷ ಬಿತ್ತಲು ಹೊರಟಿರುವುದು ಖೇದಕರ'' ಎಂದು ಹೇಳಿದ್ದಾರೆ.
''ಶರಣ್ ಅವರು ಈ ರೀತಿಯ ಕೀಳು ಮನಸ್ಥಿತಿ ಬಿಟ್ಟು ಕೊರೊನಾ ಸಂಕಷ್ಟದಲ್ಲಿ ಜಿಲ್ಲೆಗೆ ವೆಂಟಿಲೇಟರ್, ಐಸಿಯು ವ್ಯವಸ್ಥೆ ಮಾಡುವುದಕ್ಕೆ ಹೋರಾಟ ನಡೆಸಲಿ. ದೇಶದಲ್ಲಿ ಕೊರೊನಾ ನಾಶಕ್ಕೆ ನೀವು ಮಾಡುವ ಕಾರ್ಯಕ್ಕೆ ಖಂಡಿತವಾಗಿ ನಾವು ಕೂಡಾ ಸಹಕಾರ ನೀಡುತ್ತೇವೆ'' ಎಂದು ಹೇಳಿದರು.