ಪುತ್ತೂರು, ಮೇ. 10 (DaijiworldNews/HR): ಹಸಿವಿನಿಂದ ರಸ್ತೆಯಲ್ಲಿ ಬಾವಲಿ ಹಾಗೂ ಹಕ್ಕಿಗಳು ತಿಂದು ಬಿದ್ದಂತಹ ಮಾವಿನ ಹಣ್ಣನ್ನು ತಿನ್ನುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ಪತ್ರಕರ್ತರೊಬ್ಬರಿಂದ ಮಾಹಿತಿ ತಿಳಿದು ಪೊಲೀಸರಿಬ್ಬರು ತಮಗಾಗಿ ಮನೆಯಿಂದ ತಂದಿದ್ದ ಊಟವನ್ನು ಆ ವ್ಯಕ್ತಿಗೆ ನೀಡಿ ಮಾನವೀಯತೆ ಮೆರೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮಾನವೀಯತೆ ಮೆರೆದ ಪೊಲೀಸರನ್ನು ದಯಾನಂದ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ.
ಮಡಿಕೇರಿಯ ರಾಣಿಪೇಟೆ ನಿವಾಸಿಯೊಬ್ಬರು ಕಳೆದ 5 ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದು ಲಾಕ್ಡೌನ್ ಪರಿಣಾಮ ಕೆಲಸವಿಲ್ಲದೆ ಊರಿಗೆ ಮರಳಲು ಬಸ್ಸಿನ ಸೌಕರ್ಯವೂ ಇಲ್ಲದೆ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ಹೋಗಿ, ಎರಡು ದಿನಗಳಿಂದ ಊಟ ಮಾಡದೇ ಹಸಿವಿನಿಂದ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಟ್ಯಾರು ಎಂಬಲ್ಲಿ ಬಾವಲಿ ಹಾಗೂ ಹಕ್ಕಿಗಳು ತಿಂದು ಬಿದ್ದಂತಹ ಮಾವಿನ ಹಣ್ಣನ್ನು ತಿನ್ನುತ್ತಿರುವ ಬಗ್ಗೆ ಪತ್ರಕರ್ತರೊಬ್ಬರಿಂದ ಮಾಹಿತಿ ತಿಳಿದ ಪುತ್ತೂರು ಸಂಟ್ಯಾರು ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದ ಇಬ್ಬರು ಠಾಣಾ ಸಿಬ್ಬಂದಿಗಳು ಕೂಡಲೇ ಸ್ಪಂದಿಸಿ ಹಸಿವಿನಿಂದ ಕಂಗಾಲಾಗಿದ್ದ ಆತನಿಗೆ ತಮಗಾಗಿ ಮನೆಯಿಂದ ಮಧ್ಯಾಹ್ನದ ಊಟಕ್ಕೆಂದು ತಂದ ಆಹಾರವನ್ನು ನೀಡಿ ಬಳಿಕ ಒಂದು ವಾಹನದಲ್ಲಿ ಆ ವ್ಯಕ್ತಿಯನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿರುತ್ತಾರೆ.
ಇನ್ನು ಲಾಕ್ಡೌನ್ ನಂತಹ ಸಂಕಷ್ಟ ಸಮಯದಲ್ಲಿ ತಮ್ಮ ಕರ್ತವ್ಯದೊಂದಿಗೆ ಮಾನವೀಯತೆಯನ್ನು ಮೆರೆದ ಈ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.