ಮಂಗಳೂರು, ಮೇ 10 (DaijiworldNews/MB) : ಅಪರಿಚಿತ ಮಹಿಳೆಯೊಂದಿಗೆ ಫೇಸ್ಬುಕ್ನಲ್ಲಿ ಸ್ನೇಹ ಮಾಡಿ ನಗರದ ಮಹಿಳೆಯೊಬ್ಬರು 4.34 ಲಕ್ಷ ರೂ. ವಂಚನೆಗೆ ಒಳಗಾದ ಘಟನೆ ನಡೆದಿದೆ.
ಸನ್ಯಾಸಿಯರ ಗ್ರೂಪ್ ಫೋಟೋ ಪ್ರೊಫೈಲ್ ಹೊಂದಿರುವ ಸಿಸ್ಟರ್ ಮೇರಿ ಎಂದು ಗುರುತಿಸಲ್ಪಟ್ಟ ಮಹಿಳೆಯೊಬ್ಬರಿಂದ ಸಂತ್ರಸ್ತ ಮಹಿಳೆಗೆ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು ಸಂತ್ರಸ್ತ ಮಹಿಳೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಮಹಿಳೆಯ ಪರಿಚಯವಿಲ್ಲದಿದ್ದರೂ ರಿಕ್ವೆಸ್ಟ್ ಸ್ವೀಕರಿಸಿ ಅವರೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದ್ದರು.
ಆ ಮಹಿಳೆಯು ತಾನು ಧಾರ್ಮಿಕ ಸನ್ಯಾಸಿನಿ, ಯುಕೆಯ ನಿವಾಸಿ ಎಂದು ಪರಿಚಯಿಸಿಕೊಂಡಿದ್ದು ಬಳಿಕ ನಿಯಮಿತವಾಗಿ ಚಾಟ್ ಮಾಡಲು ಆರಂಭಿಸಿದ್ದರು. ಆ ಮಹಿಳೆಯು ಸಂತ್ರಸ್ತ ಮಹಿಳೆಗೆ ಬೈಬಲ್ ಉಲ್ಲೇಖಗಳು ಮತ್ತು ಇತರ ಧಾರ್ಮಿಕ ಪ್ರಾರ್ಥನೆಗಳನ್ನು ಕಳುಹಿಸುತ್ತಿದ್ದು ಈ ಮೂಲಕ ನಂಬಿಕೆ ಗಳಿಸಿದ್ದಳು.
ಎಪ್ರಿಲ್ನಲ್ಲಿ ಈ ವಿದೇಶದಲ್ಲಿ ವಾಸಿಸುವ ಮಹಿಳೆಯು ಉಡುಗೊರೆಯನ್ನು ಕಳುಹಿಸಲಿದ್ದೇನೆ ಎಂದು ಫೇಸ್ಬುಕ್ ಸ್ನೇಹಿತೆಯಾದ ಸಂತ್ರಸ್ತ ಮಹಿಳೆಗೆ ಫೋನ್ ಮಾಡಿ ತಿಳಿಸಿದ್ದು, ಆದರೆ ಮಹಿಳೆ ತನಗೆ ಉಡುಗೊರೆ ಬೇಡ ಎಂದು ನಿರಾಕರಿಸಿದರು. ಆದರೆ ಆ ವಂಚಕ ಮಹಿಳೆ ಉಡುಗೊರೆ ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದಳು.
ಏಪ್ರಿಲ್ ಎರಡನೇ ವಾರದಲ್ಲಿ ನವದೆಹಲಿಯಿಂದ ಕಸ್ಟಮ್ಸ್ ಅಧಿಕಾರಿಯೆಂದು ಪರಿಚಯಿಸಿಕೊಂಡ ಇನ್ನೊಬ್ಬ ವ್ಯಕ್ತಿಯಿಂದ ಸಂತ್ರಸ್ತ ಮಹಿಳೆಗೆ ವಾಟ್ಸಾಪ್ ಮೆಸೇಜ್ ಒಂದು ಬಂದಿದೆ. ಕಸ್ಟಮ್ಸ್ ಅಧಿಕಾರಿಯೆಂದು ಪರಿಚಯಿಸಿಕೊಂಡ ವ್ಯಕ್ತಿಯೂ ಸನ್ಯಾಸಿನಿ ಕಳುಹಿಸಿದ ಕಸ್ಟಮ್ ವಾಯುಯಾನ ಶುಲ್ಕವನ್ನು ಪಾವತಿಸುವಂತೆ ಹೇಳಿದ್ದಾನೆ. ಈ ಹಿನ್ನೆಲೆ ಈ ಸಂತ್ರಸ್ತ ಮಹಿಳೆಯು ಶುಲ್ಕವಾಗಿ ಆನಂದ್ ಶರ್ಮಾ ಎಂಬವರ ಖಾತೆಗೆ 28,000 ರೂ. ಪಾವತಿ ಮಾಡಿದ್ದಾರೆ. ದೆಹಲಿ ಪ್ರದೇಶದ ಎಸ್ಬಿಐ ಬ್ಯಾಂಕ್ ಖಾತೆ ಇದಾಗಿದೆ. ಬಳಿಕ ಸಂತ್ರಸ್ತೆಯು ಈ ಪಾವತಿಯ ಆನ್ಲೈನ್ ರಶೀದಿಯನ್ನು ಆ ಮಹಿಳೆಗೆ ಕಳುಹಿಸಿದ್ದು ಆ ಮಹಿಳೆಯು ನಂಬಿಕೆ ಇರಿಸಿದ್ದಕ್ಕೆ ಧನ್ಯವಾದ ಎಂದು ಹೇಳಿ, ಕೆಲವು ಬೈಬಲ್ ಉಲ್ಲೇಖ ಮಾಡಿ ಆಶೀರ್ವದಿಸಿದಳು
ಎರಡು ದಿನಗಳಲ್ಲಿ, ಸಂತ್ರಸ್ತೆ ಮಹಿಳೆಗೆ ಉಡುಗೊರೆ ಬಂದಿದ್ದು ಆಕೆ ಬಹಳ ಕುತೂಹಲದಿಂದ ಅದನ್ನು ತೆರೆದಳು. ಆದರೆ ಅದರಲ್ಲೊಂದು ಪತ್ರವಿದ್ದು ಆ ಮಹಿಳೆ ಇನ್ನೂ 15 ಲಕ್ಷ ರೂ. ಈ ಸಂತ್ರಸ್ತ ಮಹಿಳೆಗೆ ನೀಡಲು ಬಯಸಿರುವುದಾಗಿ ಬರೆದಿತ್ತು. ಈ ಪತ್ರದ ಪ್ರತಿಯನ್ನು ಸಂತ್ರಸ್ತ ಮಹಿಳೆ ಆ ಫೇಸ್ಬುಕ್ನಲ್ಲಿ ಪರಿಚಯಪಟ್ಟ ಮಹಿಳೆಗೆ ಕಳುಹಿಸಿದ್ದು, ಆ ಮಹಿಳೆಯು ಪತ್ರ ಮತ್ತು 15 ಲಕ್ಷ ರೂ. ಬಗ್ಗೆ ಖಾತರಿಪಡಿಸಿದ್ದು, ಈ 15 ಲಕ್ಷ ರೂ.ಗಳನ್ನು ಪಡೆಯಲು ಫಂಡ್ ಪ್ರೊಸೆಸಿಂಗ್ ಶುಲ್ಕವಾಗಿ 4.55 ಲಕ್ಷ ರೂ.ಯನ್ನು ನೀಡಬೇಕಾಗುತ್ತದೆ ಎಂದು ಸಂತ್ರಸ್ತೆಗೆ ಹೇಳಿದ್ದಾಳೆ. ಬಳಿಕ ಮನವೊಲಿಸಲು ನವದೆಹಲಿಯ ವಿದೇಶಿಯರ ಸೇವಾ ಕಚೇರಿಯಿಂದ ಮೇ 4 ರಂದು ಹೊರಡಿಸಿದ ಸ್ಲಿಪ್ ಅನ್ನು ಸಹ ಕಳುಹಿಸಿದ್ದಾಳೆ.
ಇದನ್ನು ನಂಬಿದ ಸಂತ್ರಸ್ಥೆ ಎರಡು ದಿನಗಳಲ್ಲಿ ಆನಂದ್ ಶರ್ಮಾ ಎಂಬ ವ್ಯಕ್ತಿಯ ಖಾತೆಗೆ ನಾಲ್ಕು ಬಾರಿ ಹಣ ಜಮೆ ಮಾಡಿದ್ದಾರೆ. ಎಲ್ಲಾ ವಹಿವಾಟು ವಿವರಗಳನ್ನು ಕಳುಹಿಸಿದ ನಂತರ, ಆ ಮಹಿಳೆಯು ದೊಡ್ಡ ಮೊತ್ತವನ್ನು ವರ್ಗಾಯಿಸಲು ಕಾನೂನು ಸಮಸ್ಯೆ ಉಂಟಾಗಿರುವ ಹಿನ್ನೆಲೆ ಹೆಚ್ಚಿನ ಹಣವನ್ನು ದೆಹಲಿಯ ಪೃಥು ಯಾದವ್ ಹೆಸರಿನಲ್ಲಿ ತೆರೆಯಲಾದ ಹೊಸ ಖಾತೆ ಸಂಖ್ಯೆಯನ್ನು ಕಳುಹಿಸಿದ್ದಳು.
ಇದರಿಂದಾಗಿ ಅನುಮಾನಕ್ಕೆ ಒಳಗಾದ ಮಹಿಳೆ ನಗರದ ಮಾಧ್ಯಮವೊಂದನ್ನು ಸಂಪರ್ಕಿಸಿ ತಾನು ಮೋಸಕ್ಕೆ ಒಳಗಾಗಿರುವ ಬಗ್ಗೆ ತಿಳಿಸಿದ್ದಾರೆ. ಮಾಧ್ಯಮದವರು ಸೈಬರ್ ಕ್ರೈಮ್ ಪೊಲೀಸರನ್ನು ಸಂಪರ್ಕಿಸುವಂತೆ ಆಕೆಗೆ ನಿರ್ದೇಶನ ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.