ಮಂಜೇಶ್ವರ ಮೇ 10(DaijiworldNews/SB): ಇತ್ತೀಚೆಗೆ ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಬಿಜೆಪಿ ಇದೀಗ ಮತ್ತೊಮ್ಮೆ ತೀವ್ರ ಮುಜುಗರಕ್ಕೀಡಾಗಿದೆ. ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿದ ಮತಗಟ್ಟೆವಾರು ಮತದಾನದ ಅಂಕಿ ಅಂಶಗಳ ಪ್ರಕಾರ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎರಡು ಮತಗಟ್ಟೆಗಳು ಸೇರಿದಂತೆ ಒಟ್ಟು 318 ಮತಗಟ್ಟೆಗಳಲ್ಲಿ ಬಿಜೆಪಿ "ಶೂನ್ಯ " ಸಾಧನೆ ಮಾಡಿದೆ. ಇದಲ್ಲದೆ ರಾಜ್ಯದ 493 ಮತಗಟ್ಟೆಗಳಲ್ಲಿ ಬಿಜೆಪಿ ಕೇವಲ ಒಂದು ಮತವನ್ನು ಮಾತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ದಿಸಿದ್ದ ಮಂಜೇಶ್ವರ , ಕೋನಿ ಎಂಬ ಎರಡೂ ಕ್ಷೇತ್ರಗಳ ಎರಡು ಮತಗಟ್ಟೆಗಳಲ್ಲಿ ಸೇರಿದಂತೆ ರಾಜ್ಯದ 59 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಶೂನ್ಯದ ಶಾಪ ತಟ್ಟಿದೆ. 70 ವಿಧಾನ ಸಭಾ ಕ್ಷೇತ್ರಗಳ 493 ಮತಗಟ್ಟೆಗಳಲ್ಲಿ ಬಿಜೆಪಿ ದಕ್ಕಿದ್ದೂ ಕೇವಲ ಒಂದು ಮತಗಳು ಮಾತ್ರ. 5000 ಕಿಂತಲೂ ಹೆಚ್ಚಿನ ಮತಗಟ್ಟೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕೇವಲ ಒಂದರಿಂದ ಐದು ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳಲ್ಲಿ ತಿಳಿಸಲಾಗಿದೆ. ಸಾವಿರಾರು ಕಾರ್ಯಕರ್ತರನ್ನು ಒಗ್ಗೂಡಿಸಿ ಆಯೋಜಿಸಿದ್ದ ’ವಿಜಯ ಯಾತ್ರೆ’ ಹಾಗೂ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಹಮ್ಮಿಕೊಂಡ ಪ್ರಚಾರ ಕಾರ್ಯಕ್ರಮಗಳು ಮತದಾರನಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಬಿಜೆಪಿಗೆ ದೊರಕಿದ ಮತಗಳ ಈ ಅಂಕಿ ಅಂಶಗಳಿಂದ ಕಂಡುಬರುತ್ತದೆ.
ಕಳೆದ ಚುನಾವಣೆಗಿಂದ ಐದು ಸಾವಿರ ಅಧಿಕ ಮತಗಳನ್ನು ಪಡೆದ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಏಳು ಮತಗಟ್ಟೆಗಳಲ್ಲಿ ಶೂನ್ಯ ಸಂಪಾದನೆ ಮಾಡಿದ್ದಾರೆ. ಬಿಜೆಪಿಗೆ ಅತ್ಯಧಿಕ ’ಶೂನ್ಯ’ ಹಾಗೂ ’ಒಂದಂಕಿ’ ಮತಗಳನ್ನು ನೀಡಿದ ಮತಗಟ್ಟೆಗಳು ಮಲಪ್ಪುರಂ ಜಿಲ್ಲೆಯಲ್ಲಿವೆ.