ಉಡುಪಿ, ಮೇ 10 (DaijiworldNews/MS): ಉಡುಪಿ ಜಿಲ್ಲೆಯಲ್ಲಿ ಇಂದು 18ರಿಂದ 44 ವರ್ಷ ವಯೋಮಿತಿಯ ವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಆರಂಭಗೊಳ್ಳಲಿದ್ದು ಈಗಾಗಲೇ ನೋಂದಣಿ ಮಾಡಿಕೊಂಡು ಸ್ಲಾಟ್ ಖಾತರಿಯಾಗಿರುವ ವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಡಿಎಚ್ಒ ಡಾಕ್ಟರ್ ಸುಧೀರ್ ಚಂದ್ರ ಸೂಡ ತಿಳಿಸಿದ್ದರೂ, ಜನ ಮಾತ್ರ ಲಸಿಕೆಗಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಲಸಿಕಾ ಕೇಂದ್ರದಲ್ಲಿ ಸಾಮಾನ್ಯವಾಗಿತ್ತು.
ಜಿಲ್ಲೆಯಲ್ಲಿ ಇತ್ತೀಚೆಗೆ ಲಸಿಕೆ ತೆಗೆದುಕೊಳ್ಳಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಜನದಟ್ಟಣೆಯ ಹಿನ್ನಲೆಯಲ್ಲಿ ಲಸಿಕಾ ಕೇಂದ್ರವನ್ನು ಬ್ರಹ್ಮಗಿರಿಯಲ್ಲಿರುವ ಸೈಂಟ್ ಸಿಸಿಲೀಸ್ ಶಾಲೆಗೆ ವರ್ಗಾಯಿಸಲಾಗಿತ್ತು. ಆದರೆ ಹಿರಿಯ ನಾಗರಿಕರಿಗೆ ಎರಡನೇ ಹಂತದ ಲಸಿಕೆ ಸಿಗುತ್ತದೆಯೆನ್ನುವ ನಿರೀಕ್ಷೆಯಿಂದ ಇಂದು ಬೆಳಗ್ಗೆಯಿಂದ ಶಾಲೆಯ ಮೈದಾನದವರೆಗೂ ಸರತಿಯಲ್ಲಿ ನಿಂತಿದ್ದಾರೆ.
ಉಡುಪಿಯ ಜಿಲ್ಲಾಸ್ಪತ್ರೆ ,ಸೈಂಟ್ ಸಿಸಿಲಿಸ್ ಶಾಲೆ, ಕುಂದಾಪುರ ತಾಲೂಕು ಆಸ್ಪತ್ರೆ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಾಳೆ ಮಧ್ಯಾಹ್ನದಿಂದ ಆರಂಭಗೊಳ್ಳಲಿದೆ. ಈಗಾಗಲೇ ಲಸಿಕೆಗೆ ನೊಂದಣಿ ಮಾಡಿಕೊಂಡಿರುವವರಿಗೆ ಇಂದು ಬೆಳಗ್ಗೆ ಮೊಬೈಲ್ ಗೆ ಸಂದೇಶ ಬರೆದಿದ್ದು ,ಅಂತಹವರು ಮಾತ್ರ ಲಸಿಕೆ ಪಡೆಯಲು ಬರಬಹುದು ಎಂಬ ಸೂಚನೆ ನೀಡಲಾಗಿತ್ತು ಆದರೂ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ.
೪೫ ವರ್ಷ ಮೇಲ್ಪಟ್ಟವರು ಮೊದಲ ಹಂತದ ಡೋಸ್ ಪಡೆದು ಎರಡನೆ ಲಸಿಕೆ ಪಡೆಯಲು ತುದಿಗಾಲಲ್ಲಿ ನಿಂತಿದ್ದು ಈಗ ರಾಜ್ಯದಿಂದ ದೊರಕುವ ಲಸಿಕೆ ಎಲ್ಲಿಯೂ ಸಾಕಾಗುತ್ತಿಲ್ಲ. ನಾಗರೀಕರಿಗೆ ಇಲಾಖೆಯಿಂದ ಎಷ್ಟೇ ಬುದ್ದಿ ಮಾತು ಹೇಳಿದರೂ ಲಸಿಕೆ ಸಿಗುತ್ತದೆ ಎನ್ನುವ ಆಶಾವಾದದಿಂದ ಮತ್ತೆ ಸರತಿ ಸಾಲಲ್ಲಿ ನಿಂತು ಗಂಟೆಗಟ್ಟಲೆ ಕಾಯುವುದು ಮುಂದುವರಿಸುತ್ತಾರೆ.
ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಮಂದಿ 18ರಿಂದ 44 ವರ್ಷ ವಯೋಮಿತಿಯವರಿದ್ದಾರೆ. ಅವರಿಗೂ 4 ರಿಂದ 5 ಲಕ್ಷ ಡೋಸ್ ನ ಅವಶ್ಯಕತೆ ಇದೆ.