ಮಂಗಳೂರು, ಮೇ.10 (DaijiworldNews/PY): ದ.ಕ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ತೀವ್ರತೆ ಪಡೆಯುತ್ತಿದ್ದು, ಕಳೆದ ಎರಡು ತಿಂಗಳುಗಳಲ್ಲಿ ಕೊರೊನಾ ಸೋಂಕು ದೃಢಪಟ್ಟವರಲ್ಲಿ ಶೇ.50ಕ್ಕೂ ಅಧಿಕ ಮಂದಿ ಯುವಕರು ಎನ್ನುವುದು ಆತಂಕದ ವಿಚಾರ.
ಜಿಲ್ಲೆಯಲ್ಲಿ ಮಾರ್ಚ್ 1ರಿಂದ ಇಲ್ಲಿಯವರೆಗೆ ಒಟ್ಟು 10,544 ಮಂದಿಗೆ ಸೋಂಕು ತಗುಲಿದ್ದು, ಇದರಲ್ಲಿ 5,862 ಮಂದಿ 16 ರಿಂದ 30 ವರ್ಷದೊಳಗಿನವರಾಗಿದ್ದಾರೆ. ಅದರಲ್ಲೂ 16 ರಿಂದ 20 ವರ್ಷದೊಳಗಿನ 1,603 ಮಂದಿ ಹಾಗೂ 21 ರಿಂದ 30 ವರ್ಷದೊಳಗಿನ 4,259 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾದ ಮೊದಲ ಅಲೆಗೆ ಹೋಲಿಕೆ ಮಾಡಿದರೆ, ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಪ್ರತಿದಿನದ ಪಾಸಿಟಿವ್ ಪ್ರಕರಣದಲ್ಲಿ ಶೇ.5ಕ್ಕೂ ಅಧಿಕ ಮಂದಿ ಯುವಕರೇ ಆಗಿದ್ದಾರೆ.
ಕೊರೊನಾ ಬಗ್ಗೆ ನಿರ್ಲಕ್ಷ್ಯ ಇದಕ್ಕೆ ಮುಖ್ಯವಾದ ಕಾರಣ ಎಂದು ವೈದ್ಯರು ಹೇಳುತ್ತಾರೆ. ಕೊರೊನಾದ ಮೊದಲ ಅಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೋಂಕು ಬರುವ ಸಾಧ್ಯತೆಗಳು ಹೆಚ್ಚಿತ್ತು. ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಯುವಕರಿಗೆ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇತ್ತು. ಆದರೆ, ಈ ಬಾರಿ ಯುವಕರಿಗೆ ವೇಗವಾಗಿ ಸೋಂಕು ತಗುಲಿತ್ತಿರುವುದು ಆತಂಕದ ಸಂಗತಿಯಾಗಿದೆ.
ಕೊರೊನಾ ಬಗ್ಗೆ ಯುವಕರು ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತಿರುವುದು ಅಪಾಯಕಾರಿ ಎನ್ನುವ ಮುನ್ನೆಚ್ಚರಿಕೆಯನ್ನು ಅಂಕಿ-ಅಂಶಗಳು ನೀಡುತ್ತಿದೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಹೇರಲಾಗಿದೆ. ಜಿಲ್ಲೆಯಲ್ಲಿ ಕರ್ಫ್ಯೂ ಸಡಿಲಿಕೆ ಮುಗಿದರೂ ಕೂಡಾ ಅನಗತ್ಯವಾಗಿ ತಿರುಗಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಮಾರ್ಗಸೂಚಿಯನ್ನು ನಿರ್ಲಕ್ಷಿಸುವುದರಿಂದ ಯುವಕರಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗಲು ಕಾರಣವಾಗಿದೆ.
ದ.ಕ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಕೊರೊನಾದ ಮೊದಲ ಅಲೆಗಿಂತ ಎರಡನೇ ಅಲೆಯು ಅತ್ಯಂತ ವೇಗವಾಗಿ ಹರಡುತ್ತಿದೆ. ಅಕ್ರಿಯ ಪ್ರಕರಣಗಳಲ್ಲಿ ಶೇ.50ರಷ್ಟು ಯುವಕರಲ್ಲಿ ಕೊರೊನಾ ಬಾಧಿಸುತ್ತಿರುವುದು ಆತಂಕದ ಸಂಗತಿ. ಲಾಕ್ಡೌನ್ ಮಾದರಿಯ ಕರ್ಫ್ಯೂ ಜಾರಿಯಲ್ಲಿದ್ದರೂ ಕೂಡಾ ಯುವಕರು ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡುತ್ತಿರುತ್ತಾರೆ. ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರವೇ ಕೊರೊನಾ ನಿಯಂತ್ರಣ ಸಾಧ್ಯ" ಎಂದಿದ್ದಾರೆ.