ಕಾರ್ಕಳ, ಮೇ.09 (DaijiworldNews/PY): "ಕೊರೊನಾ ಮಹಾಮಾರಿಯ ಮೊದಲ ಅಲೆಯ ದುರಂತ ಪರಿಣಾಮಗಳ ಹೊಣೆಯನ್ನು ತಬ್ಲೀಗಿಗಳ ಮೇಲೆ ಹೊರಿಸಲು ನೋಡಿ ವಿಶ್ವ ಮಟ್ಟದಲ್ಲಿ ಟೀಕೆಗೊಳಗಾದ ಬಿಜೆಪಿ ಇದೀಗ ಎರಡನೇ ಅಲೆಯ ಭೀಕರತೆಯನ್ನು ಎದುರಿಸುವಲ್ಲಿಯೂ ಸಂಪೂರ್ಣ ವಿಫಲಗೊಂಡಿದೆ" ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, "ತನ್ನ ವೈಫಲ್ಯವನ್ನು ಮರೆ ಮಾಚಲು ತನ್ನವರೆ ಮಾಡಿದ ಬೆಡ್ ಬುಕ್ಕಿಂಗ್ ಹಗರಣವನ್ನುಒಂದು ನಿರ್ದಿಷ್ಟ ಕೋಮಿನವರ ಮೇಲೆ ಕಟ್ಟಿ, ಜನರ ಗಮನ ಬೇರೆಡೆ ಸೆಳೆದು, ತನ್ನ ಕೋಮು ರಾಜಕೀಯದ ಹಳೇ ಛಾಳಿಯನ್ನು ಮತ್ತೆ ಮುಂದುವರಿಸಲು ನೋಡುತ್ತಿದೆ. ಇದು ಖಂಡನೀಯ" ಎಂದಿದ್ದಾರೆ.
"ಕೇರಳ, ತಮಿಳುನಾಡು, ದೆಹಲಿ, ಆಂಧ್ರ ಪ್ರದೇಶದ ಸರಕಾರಗಳು ಕೊರೊನಾ ಸಂಕಷ್ಬ ಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ಅವರಿಗೆ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಉಚಿತ ಔಷದಿ, ಆಸ್ಪತ್ರೆ, ಆಹಾರ ಪದಾರ್ಥ, ಆಟೋ, ಕ್ಯಾಬ್ ಚಾಲಕರಿಗೆ ಗೃಹ ಕಸುಬುದಾರರಿಗೆ 5 ರಿಂದ 10 ಸಾವಿರ ರೂ. ಪರಿಹಾರ ಧನ, ಬಡ್ಡಿ ರಹಿತ ಸಾಲ, ಸಾಲ ವಸೂಲಾತಿಗೆ ತಡೆ ಮೊದಲಾದ ಜನ ಪರ ಜೀವನಾವಶ್ಯಕ ನಿರ್ಣಯಗಳನ್ನು ಕೈಗೊಂಡಿವೆ. ಆದರೆ ರಾಜ್ಯದ ಬಿಜೆಪಿ ಸರಕಾರ ಜನರಿಗೆ ಬದುಕು ಕಟ್ಟಿಕೊಡುವ ಬದಲು ಕೊರೊನಾ ಸಂಕಷ್ಟವನ್ನೇ ತನ್ನ ಬಲಪಡಿಸುವ ಅಸ್ತ್ರವನ್ನಾಗಿಸಿಕೊಳ್ಳುತ್ತಿದೆ. ಜೀವರಕ್ಷಕ ಔಷಧಿ, ಆಕ್ಸಿಜನ್ ಕಾಳಸಂತೆ, ಬೆಡ್ ಬುಕ್ಕಿಂಗ್ ದಂಧೆ, ಐಸಿಯು, ವೆಂಟಿಲೇಟರ್ಗಳ ಕೃತಕ ಕೊರತೆಯನ್ನು ಸೃಷ್ವಿಸುವ ಕಾಳಸಂತೆಕೋರರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಕೈ ಚೆಲ್ಲಿ ಕೂತಿದೆ" ಎಂದಿದ್ದಾರೆ.
"ಮೇ 10ರಿಂದ ಜಾರಿಗೆ ತಂದ ಲಾಕ್ ಡೌನ ಅಪಸವ್ಯಗಳ ಆಗರವಾಗಿದೆ. ಇದೊಂದು ಅಪ್ರಬುದ್ದ ನಿರ್ಣಯವಾಗಿದ್ದು ಸರಕಾರ ತನ್ನ ಜುಟ್ಟನ್ನು ಈ ನಾಡಿನ ಜನರ ನಾಡಿ ಮಿಡಿತವನ್ನರಿಯದ ಆಡಳಿತ ಶಾಹಿ ಬ್ಯೂರೋಕ್ರೇಟ್ಸ್ಗಳ ಕೈಯಲ್ಲಿ ಕೊಟ್ಟಂತಿದ್ದು , ಕೊರೊನಾ ನಿಗ್ರಹಿಸುವುದಕ್ಕಿಂತಲೂ ಹೆಚ್ಚಾಗಿ ದಂಡ ವಸೂಲಾತಿಯನ್ನು ಮಾಡಿ ಸರಕಾರ ಹಣ ಸಂಗ್ರಹಿಸುವ ಗುರಿ ಹೊಂದಿದಂತೆ ಕಾಣುತ್ತಿದೆ" ಎಂದಿದ್ದಾರೆ.
"ಮಲೆನಾಡು ಕರಾವಳಿ ಭಾಗಗಳಲ್ಲಿ ಮೈಲುದ್ದ ದೂರದ ದಾರಿ, ಮೈಲುದ್ದ ಪೇಟೆ, ಮೈಲುದ್ದ ದೂರದ ಮನೆಗಳು , ಔಷಧಿ, ಆಸ್ಪತ್ರೆ, ಬ್ಯಾಂಕ್, ಅಂಗಡಿಗಳಿಗೆ, ಆಟೋ, ಬಾಡಿಗೆ ವಾಹನಗಳಿಲ್ಲದೆ ನಡೆದು ಹೋಗಲು ಸಾಧ್ಯವೇ?. ಲಾಕ್ ಡೌನ್ ಅನಿವಾರ್ಯ, ಸ್ವಾಗತಾರ್ಹ, ಆದಾಗ್ಯೂ ಬೆಳಿಗ್ಗೆ 6 ಗಂಟೆಯಿಂದ 10ಗಂಟೆಯವರೆಗೆ ವಾಹನಗಳ ಬಳಕೆಗೆ ಅವಕಾಶ ಮಾಡಿಕೊಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.