ಉಡುಪಿ, ಮೇ. 08 (DaijiworldNews/HR): "ಜನರು ಈಗ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು, ರೋಗಲಕ್ಷಣದ ಜನರು ಆಸ್ಪತ್ರೆಗೆ ಬರುತ್ತಿಲ್ಲ. ಮನೆಯಿಂದ ನೇರವಾಗಿ ವೆಂಟಿಲೇಟರ್ ಸೌಲಭ್ಯಗಳನ್ನು ಪಡೆಯಲು ಬರುವವರನ್ನು ಸ್ವೀಕರಿಸಲಾಗುವುದಿಲ್ಲ. ಅವರ ನಿರ್ಲಕ್ಷ್ಯಕ್ಕೆ ನಾವು ಜವಾಬ್ದಾರರಲ್ಲ. ಯಾರಾದರೂ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೆ, ಆಸ್ಪತ್ರೆಗೆ ಬರಬೇಕು. ಪರಿಸ್ಥಿತಿ ಹದಗೆಟ್ಟ ನಂತರ ಬರಬೇಡಿ. ಜನರು ಮೊದಲು ಇಂತಹ ಅಭ್ಯಾಸವನ್ನು ತಪ್ಪಿಸಬೇಕು" ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಮೇ 8 ರ ಶನಿವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಉಡುಪಿಯಲ್ಲಿ ಆಮ್ಲಜನಕ ಹಾಸಿಗೆಗಳ ಕೊರತೆ ಇಲ್ಲ, 1300 ಹಾಸಿಗೆಗಳಿದ್ದು, ಅದರಲ್ಲಿ 350 ಹಾಸಿಗೆಗಳಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದರು.
ಪ್ರಮುಖ ಅಂಶಗಳು :
ಕಂಟೈನ್ಮೆಂಟ್ ವಲಯದ ಹೊರಗಿನ ಸ್ಥಳದಲ್ಲಿರುವ ಕಾರ್ಮಿಕರನ್ನು ಕಾಮಗಾರಿ ನಿವೇಶನದಲ್ಲಿ ಉಳಿಸಿಕೊಂಡು ನಿರ್ಮಾಣ ಕಾಮಗಾರಿ ಮಾಡುವುದಾದರೆ ಮಾತ್ರ ಅವಕಾಶವಿದೆ. ಕಾರ್ಮಿಕರು ಹೊರಗಿನಿಂದ ಬರಲು ಅವಕಾಶಗಳಿಲ್ಲ. ಯಾರೂ ಕೂಡ ಕಾರ್ಮಿಕರನ್ನು ಕರೆತರಿಸಿ ಜಿಲ್ಲಾಡಳಿತ ಇವರ ಹೊಣೆ ಹೊರಬೇಕೆಂದರೆ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಇಂತಹ ಕಾರ್ಮಿಕರನ್ನು ರವಿವಾರದ ಒಳಗೆ ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸಬೇಕು. ಅವರನ್ನು ತಂದು ಅರ್ಧದಲ್ಲಿ ಕೈಬಿಡಬಾರದು.
ಯಾರಾದರೂ ಕೊರೊನಾ ಮಾನದಂಡಗಳನ್ನು ಉಲ್ಲಂಘಿಸಿದರೆ, ಮೇ 10 ರಿಂದ 24 ರವರೆಗೆ ಶಿಕ್ಷೆ ವಿಧಿಸಲಾಗುತ್ತದೆ.
ಬಂದರು ಪ್ರದೇಶಗಳಿಗೆ ಸಾರ್ವಜನಿಕರು ಪ್ರವೇಶಿಸಿ ಮೀನು ಖರೀದಿ ಮಾಡುವಂತಿಲ್ಲ. ಅಲ್ಲಿಂದ ರೀಟೇಲರ್ ಮೂಲಕ ಮಾರುಕಟ್ಟೆಯಲ್ಲಿ ಖರೀದಿಸಬಹುದು. ಮೀನನ್ನು ಮನೆಗೆ ಸ್ಕೂಟರ್ನಲ್ಲಿ ಕೊಂಡೊಯ್ದು ಮಾರಾಟಕ್ಕೆ ಅವಕಾಶವಿದೆ
ಆರೋಗ್ಯ ತುರ್ತು ಸಮಯದಲ್ಲಿ ಹೊರತುಪಡಿಸಿ ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಪ್ರಯಾಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆರೋಗ್ಯ ಅಧಿಕಾರಿಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದಕ್ಕೆ ಮತ್ತು ಅಂತರರಾಜ್ಯಕ್ಕೆ ಪ್ರಯಾಣಿಸಲು ಅವಕಾಶವಿದೆ, ಆದರೆ ಗುರುತಿನ ಚೀಟಿಯನ್ನು ಪ್ರಸ್ತುತಪಡಿಸಬೇಕು. ರೈಲು ಮತ್ತು ವಿಮಾನಗಳ ಮೂಲಕ ಪ್ರಯಾಣಿಸಲು ಯಾವುದೇ ನಿರ್ಬಂಧವನ್ನು ವಿಧಿಸಲಾಗುವುದಿಲ್ಲ.
ಆರೋಗ್ಯ ಕಾರಣಗಳಿಗಾಗಿ ಮಾತ್ರ ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳ ಚಲನೆಗೆ ಅನುಮತಿ ನೀಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿ.ಪಂ. ಸಿಇಒ ಡಾ|ನವೀನ್ ಭಟ್, ಎಡಿಸಿ ಸದಾಶಿವ ಪ್ರಭು, ಸಹಾಯಕ ಕಮಿಷನರ್ ರಾಜು ಉಪಸ್ಥಿತರಿದ್ದರು.