ಮಂಗಳೂರು, ಮೇ 08 (DaijiworldNews/MB) : ಮಂಗಳೂರು ನಗರ ಪಾಲಿಕೆಯ ಅಧಿಕಾರಿಗಳು ಪದವಿನಂಗಡಿಯಲ್ಲಿ ಬಳಿ ಭೀಕರ ರಸ್ತೆ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೇ. 7ರ ಶುಕ್ರವಾರ ನಡೆದ ಅಪಘಾತದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಅಲ್ಲಿಯೇ ರಸ್ತೆ ಬದಿಯಲ್ಲೇ ಇರುವ ಅಂಗಡಿಯ ಮಾಲೀಕರು ತಮ್ಮ ಜಮೀನಿನ ಎರಡು ಸೆಂಟ್ಸ್ ಜಾಗವನ್ನು ರಸ್ತೆ ನಿರ್ಮಾಣಕ್ಕಾಗಿ 2010 ರಲ್ಲಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ಅಂಗಡಿಯ ಮೆಟ್ಟಿಲುಗಳನ್ನು ತೆಗೆದು ಅಲ್ಲಿ ಫುಟ್ಪಾತ್ ನಿರ್ಮಾಣ ಮಾಡಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ.
ಹಾಗೆಯೇ ಎಂಸಿಸಿ ಅಧಿಕಾರಿಗಳು ಪ್ರಯಾಣಿಕರಿಗೆ ಸಂಚಾರದ ವೇಳೆ ಅಡ್ಡಲಾಗಿದ್ದ ವಿಭಾಜಕದ ಮೇಲಿನ ಸಸಿಯನ್ನು ತೆರವುಗೊಳಿಸಿದ್ದಾರೆ.
ಅಪಘಾತ ವಲಯ
ಪದವಿನಂಗಡಿ ಬಳಿಯ ಪೆರ್ಲಗುರಿಯಲ್ಲಿರುವ ಪ್ರದೇಶವು ಅಪಘಾತ ಪೀಡಿತ ಪ್ರದೇಶವಾಗಿದ್ದು, ಇಲ್ಲಿ ಹಲವಾರು ಅಪಘಾತಗಳು ಸಂಭವಿಸಿದೆ. ವಿಭಾಜಕದಲ್ಲಿರುವ ಪೊದೆಗಳು ಮುಂಭಾಗದಿಂದ ಬರುವ ವಾಹನಗಳು ಕಾಣದಂತೆ ಅಡ್ಡಲಾಗುತ್ತದೆ. ಇದು ಭಾರೀ ಅಪಾಯಕಾರಿ ಎಂದು ಹೇಳಲಾಗಿದೆ.
ಇನ್ನು 100 ಮೀಟರ್ ಅಂತರದಲ್ಲಿಯೇ ಇರುವ ವಿಭಾಜಕದ ನಡುವಿನ ಎರಡು ಸ್ಥಳಗಳು ಅವೈಜ್ಞಾನಿಕವಾಗಿದೆ. ಆ ಪ್ರದೇಶದಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿ ಬರುವುದರಿಂದ ಅಪಾಯ ಅಧಿಕವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಲಾಕ್ಡೌನ್ ಕಾರಣ, ಸಂಚಾರದಟ್ಟಣೆ ಕಡಿಮೆ, ಈ ಹಿನ್ನೆಲೆ ಅಧಿಕ ವೇಗದಲ್ಲಿ ವಾಹನ ಚಲಾಯಿಸಲಾಗುತ್ತಿದೆ ಎಂಬುದು ಕೂಡಾ ಗಮನಿಸಬೇಕಾದ ವಿಚಾರ.
ಎರಡು ತಿಂಗಳ ಹಿಂದೆ, ಅದೇ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಇನ್ನು ಶುಕ್ರವಾರ ನಡೆದ ಅಪಘಾತದ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಜಾಲತಾಣದಲ್ಲಿ ವೇಕ್ಅಪ್ಎಂಸಿಸಿ ಬಹಳ ಟ್ರೆಂಡಿಂಗ್ ಆಗಿತ್ತು.