ಮಂಗಳೂರು, ಮೇ 08 (DaijiworldNews/MB) : ಮಧ್ಯ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ಏಪ್ರಿಲ್ 20 ರಂದು ಅಪ್ರಾಪ್ತ ಪ್ರಾಯದ ಹುಡುಗನಿಗೆ ಚೂರಿ ತೋರಿಸಿ ಬೆದರಿಸಿ ಆತನ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನ ತರುವಂತೆ ಹೇಳಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿಯನ್ನು ರಂಜಿತ್ ಎಂದು ಗುರುತಿಸಲಾಗಿದೆ.
ಅಪ್ರಾಪ್ತ ಬಾಲಕನೊಬ್ಬನಿಗೆ ಚೂರಿ ತೋರಿಸಿ ಚಿನ್ನವನ್ನು ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಈ ಪ್ರಕರಣ ನಾಟಕೀಯ ತಿರುವನ್ನು ಪಡೆದುಕೊಂಡಿದೆ.
ಘಟನೆಯ ವಿವರ
ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಈ ಅಪ್ರಾಪ್ತ ಬಾಲಕ ಸಿಗರೇಟು ಸೇದುತ್ತಿದ್ದಾಗ ಆತನ ವಿಡಿಯೋವನ್ನು ರಂಜಿತ್ ಮಾಡಿದ್ದಾನೆ ಎಂದು ಹೇಳಲಾಗಿದ್ದು ಈ ವಿಡಿಯೋವನ್ನು ತೋರಿಸಿ ಬೆದರಿಸಿ ಮನೆಯಿಂದ 20,000 ರೂ. ನಗದು ತರುವಂತೆ ಒತ್ತಾಯಿಸಿದ್ದಾನೆ. ಹಣ ತರದಿದ್ದರೆ ಈ ವಿಡಿಯೋವನ್ನು ಹೆತ್ತವರಿಗೆ ತೋರಿಸುವುದಾಗಿ ಹೇಳಿದ್ದಾನೆ. ಇದರಿಂದಾಗಿ ಆತಂಕಕ್ಕೆ ಒಳಗಾದ ಬಾಲಕ ಮನೆಯಲ್ಲಿ ಯಾವುದೇ ನಗದು ಸಿಗದ ಕಾರಣ ಮನೆಯಿಂದ ಚಿನ್ನವನ್ನು ತಂದು ರಂಜಿತ್ಗೆ ನೀಡಿದ್ದಾನೆ. ಈ ಘಟನೆ ಮಧ್ಯ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ಏಪ್ರಿಲ್ 20 ರಂದು ನಡೆದಿದೆ.
ಇನ್ನು ಈ ಬಾಲಕನಿಂದ ಚಿನ್ನವನ್ನು ಪಡೆದ ರಂಜಿತ್, ಆ ಆಭರಣವನ್ನು ಎರಡು ಬಾರಿ ಖಾಸಗಿ ಫಿನಾನ್ಸ್ ಸಭೆಯಲ್ಲಿ ಅಡವಿಟ್ಟು ಸಾವಿರಾರು ರೂಪಾಯಿ ಪಡೆದಿದ್ದಾನೆ.
ಈ ಘಟನೆಯು ಅಪ್ರಾಪ್ತ ಬಾಲಕನ ಹೆತ್ತವರ ಗಮನಕ್ಕೆ ಬರುತ್ತಿದ್ದಂತೆ, ಬಾಲಕನು ತನ್ನ ಹೆತ್ತವರನ್ನು ಮನವೊಲಿಸಲು 'ನಾಟಕೀಯ' ಕಥೆಯನ್ನು ಕಟ್ಟಿ ಹೇಳಿದ್ದನು. ರಂಜಿತ್ ಚೂರಿ ತೋರಿಸಿ ಬೆದರಿಸಿ ಕಾರಣ ಚಿನ್ನವನ್ನು ನೀಡಿದ್ದೇನೆ ಎಂದು ಹೇಳಿಕೊಂಡಿದ್ದ. ಪೋಷಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ಬಳಿಕ ಆರೋಪಿ ಹಾಗೂ ಬಾಲಕ ತಪ್ಪೊಪ್ಪಿಕೊಂಡಿದ್ದಾರೆ. ಈ ಘಟನೆಯನ್ನು ಡಿಸಿಪಿ ಹರಿರಂಶಂಕರ್ ದೃಢಪಡಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ನೆರೆಮನೆಯವನಾದ ಕಾರಣ ಅಪ್ರಾಪ್ತ ಬಾಲಕನ ಪೋಷಕರು ದೂರು ದಾಖಲಿಸಲು ಮುಂದೆ ಬಂದಿಲ್ಲ.