ಉಡುಪಿ, ಮೇ.08 (DaijiworldNews/PY): ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿದ್ದ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚಿನ ಕುಟುಂಬಗಳಿಗೆ ಉಡುಪಿಯ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ರಂಝಾನ್ ಪ್ರಯುಕ್ತ ರೇಷನ್ ಕಿಟ್ ನೀಡಿ ನೆರವಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಸೇರಿದಂತೆ ಕಾಪು, ಕಾರ್ಕಳ ಹಾಗೂ ಉಡುಪಿ ತಾಲೂಕಿನ ಬಡ ಕುಟುಂಬಗಳಿಗೆ ಈ ರೇಷನ್ ಕಿಟ್ಗಳನ್ನು ತಲುಪಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜೆ.ಐ.ಎಚ್ ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, "ಸಂಕಷ್ಟದ ಸಮಯದಲ್ಲಿ ಜನರ ನೋವಿಗೆ ಸ್ಪಂದಿಸುವುದು ಇಸ್ಲಾಂ ಕಲಿಸಿಕೊಟ್ಟ ಆದರ್ಶ. ಜಮಾತೆ ಇಸ್ಲಾಂ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸೂರಿಲ್ಲದವರಿಗೆ ಸೂರು ಒದಗಿಸುವ ಕಾರ್ಯ, ಸ್ವಯಂ ಉದ್ಯೋಹ ಸಹಾಯ ಹೀಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತಾ ಬಂದಿದೆ. ಇದರ ಅಂಗ ಸಂಸ್ಥೆಯಾದ ಹೆಚ್ಆರ್ಎಸ್ ಈಗಿನ ಕೊರೊನಾ ತುರ್ತು ಸಂದರ್ಭದ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಲಾಕ್ಡೌನ್ ಸಮಯದಲ್ಲಿ ಜಿಲ್ಲೆಯಾದ್ಯಂತ 2,500ಕ್ಕೂ ಅಧಿಕ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಿದ್ದೇವೆ" ಎಂದು ತಿಳಿಸಿದ್ದಾರೆ.
"ಹೆಚ್ಆರ್ಎಸ್ ಘಟಕವು ಜಿಲ್ಲೆಯಲ್ಲಿ ಕೊರೊನಾ ರಿಲೀಫ್ ಕಾರ್ಯದಲ್ಲಿ ತೊಡಗಿಕೊಂಡಿದ್ದು, ರೋಗಿಗಳಿಗೆ ಬೇಕಾದ ಎಲ್ಲಾ ಅಗತ್ಯ ಸಹಾಯವನ್ನು ಮಾಡುತ್ತಿದೆ. ಅಲ್ಲದೇ, ಆಯುಷ್ಮಾನ್ ಮಾರ್ಗದರ್ಶಿ, ಅಂಬ್ಯುಲೆನ್ಸ್ ಸೇವೆ, ಡಾಕ್ಟರ್ ಸೇವೆ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದೆ. ಕೊರೊನಾ ಸೋಂಕಿತ ವ್ಯಕ್ತಿ ವೃತಪಟ್ಟಾಗ ಅವರ ಅಂತ್ಯಕ್ರಿಯೆ ಕಾರ್ಯದಲ್ಲೂ ತೊಡಗಿಸಿಕೊಂಡಿತ್ತು" ಎಂದು ಹೇಳಿದ್ದಾರೆ.
ಹೆಚ್ಆರ್ಎಸ್ನ ಸಂಚಾಲಕ ಹಸನ್ ಪ್ರತಿಕ್ರಿಯಿಸಿದ್ದು, "ಕಳೆದ ಬಾರಿಯ ಲಾಕ್ಡೌನ್ನಂತೆ ಈ ಬಾರಿಯೂ ನಮ್ಮ ಕಾರ್ಯಕರ್ತರು ರಾತ್ರಿ ಹಗಲೆನ್ನದೇ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಸ್ಥಾಪಿಸಲಾಗಿದೆ. ಈಗಾಗಲೇ ನೂರಾರು ಮಂದಿ ಕರೆ ಮಾಡಿ ಸಹಾಯ ಕೋರಿದ್ದಾರೆ. ನಮ್ಮ ತಂಡ ಅವರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದೆ. ಬಡ್, ಆಕ್ಸಿಜನ್ ವೆಂಟಿಲೇಟರ್ನ ಅಗತ್ಯವಿದ್ದಗ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅದನ್ನು ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಜಮಾತೆ ಹಿಂದ್ ವತಿಯಿಂದ ಸಾವಿರಾರು ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಗಿದೆ" ಎಂದಿದ್ದಾರೆ.