ಕಾಸರಗೋಡು,ಮೇ 08 (DaijiworldNews/MS): ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಇಂದಿನಿಂದ 9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗಿದ್ದು , ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ .
ಜನರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನ್ನು ಪಾಲಿಸುವ ದೃಶ್ಯ ಕಂಡುಬರುತ್ತಿದೆ. ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಕಂಡು ಬರುತ್ತಿದ್ದು , ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ . ಅನಗತ್ಯವಾಗಿ ರಸ್ತೆಗಿಳಿದವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರ ಇಲ್ಲದೆ ಸಂಚರಿಸಿದ್ದಲ್ಲಿ ವಾಹನ ಜಪ್ತಿ ಅಥವಾ ದಂಡ ವಸೂಲಿ ಮಾಡಿ ಹಿಂದಕ್ಕೆ ಕಳುಹಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸಂಚರಿಸಲು ಪ್ರಮಾಣ ಪತ್ರ ಹಾಗೂ ಪೊಲೀಸ್ ಪಾಸ್ ಹೊಂದಿದವರಿಗೆ ಮಾತ್ರ ಇನ್ನು ಮುಂದೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ದಿನಸಿ , ಹಣ್ಣು ಹಂಪಲು , ತರಕಾರಿ , ಹಾಲು , ಮಾಂಸ , ಮೀನು ಮಾರಾಟಕ್ಕೆ ಅನುಮತಿ ನೀಡಲಾಗಿದೆ . ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತ ಗೊಳಿಸಿದೆ. ಅಂಗಡಿ , ಹೋಟೆಲ್ ಗಳು ಬೆಳಿಗ್ಗೆ 6 ರಿಂದ ಸಂಜೆ 7. 30 ರ ತನಕ ತೆರೆಯಬಹುದು ಬ್ಯಾಂಕ್ ಗಳು ಬೆಳಿಗ್ಗೆ 10 ರಿಂದ 1 ಗಂಟೆ ತನಕ ವಾರದಲ್ಲಿ ಮೂರು ದಿನ ತೆರೆಯಬಹುದು. ಗ್ಯಾರೇಜ್ ತೆರೆಯಲು ವಾರದ ಕೊನೆಯ ಎರಡು ದಿನ ಅವಕಾಶ ನೀಡಲಾಗಿದೆ.
ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಪೂರ್ವ ನಿಗದಿತ ವಿವಾಹಗಳಿಗೆ 50 ಮಂದಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮದ್ಯದಂಗಡಿ ತೆರೆಯಲು ಅವಕಾಶವಿಲ್ಲ. ಸರಕು ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಹೊರ ರಾಜ್ಯಗಳಿಂದ ಕೇರಳಕ್ಕೆ ಆಗ ಮಿಸುವವರು ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ ನೋಂದಾಯಿಸಬೇಕು ಹಾಗೂ 14 ದಿನ ಕ್ವಾರಂಟೈನ್’ನಲ್ಲಿರಬೇಕಾಗುತ್ತದೆ.
ತಲಪಾಡಿ ಸೇರಿದಂತೆ ಜಿಲ್ಲೆಯ 17 ಗಡಿಗಳಲ್ಲಿ ತಪಾಸಣೆ , ನಡೆಸಲಾಗುತ್ತಿದ್ದು 7 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ , ಪೊಲೀಸರ ಸಹಯೋಗದೊಂದಿಗೆ ತಪಾಸಣೆ ನಡೆಸಲಾಗುತ್ತಿದ್ದು , ಸರಕು ವಾಹನ ಸಾಗಾಟಕ್ಕೆ ಯಾವುದೇ ಅಡಚಣೆಯಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ . ಬಿ ರಾಜೀವ್ ತಿಳಿಸಿದ್ದಾರೆ