ಹೆಬ್ರಿ, ಮೇ 08 (DaijiworldNews/MS): ಬೆಳ್ವೆ ಜುಮ್ಮಾ ಮಸೀದಿ ಸಮೀಪದಲ್ಲಿ ಮೇ ೬ ರ ಗುರುವಾರ ರಾತ್ರಿ 10.30 ರ ಸುಮಾರಿಗೆ ದ್ವಿಚಕ್ರ ವಾಹನ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತರಾಗಿದ್ದಾರೆ. ಮೃತರನ್ನು ಬೆಳ್ವೆ ನಿವಾಸಿ ನಾಗರಾಜ್ (17), ನಾಲ್ಕೂರು ಗ್ರಾಮದ ಮೂದ್ದೂರು ನಿವಾಸಿ ಪ್ರಜ್ವಲ್(21)ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೋರ್ವ ಯುವಕ ತೀರ್ಥಹಳ್ಳಿ ಮೂಲದ ಹಿಲಿಯಾಣ ನಿವಾಸಿ ವಿನಯ (20), ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ನಾಗರಾಜ್ ಗೋಳಿಯಂಗಡಿಯಲ್ಲಿ ಅಂಗಡಿ ಹೊಂದಿರುವ ಬೆಳ್ವೆ ಗೋಪಾಲ ಮಡಿವಾಳ ಹಾಗೂ ಪಾರ್ವತಿ ದಂಪತಿಯ ಪುತ್ರನಾಗಿದ್ದು, ಈತ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ.
ಮೃತ ಪ್ರಜ್ವಲ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ನಾಲ್ಕೂರು ಗ್ರಾಮದ ಮುದ್ದೂರು ಚಂದ್ರ ಮಡಿವಾಳ ಹಾಗೂ ಸುಶೀಲಾ ದಂಪತಿಯ ಹಿರಿಯ ಮಗ, ಈತನ ತಂದೆ ಬೆಂಗಳೂರಿನಲ್ಲಿ ಕ್ಯಾಟರಿಂಗ್ ಸರ್ವೀಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗಾಯಾಳು ವಿನಯ ಹಿಲಿಯಾಣ ನಿವಾಸಿ, ತೀರ್ಥಹಳ್ಳಿ ಮೂಲದ ಉಮೇಶ ಮಡಿವಾಳ ಚಂದ್ರಾವತಿ ದಂಪತಿಯ ಮಗ ಎಂದು ಗುರುತಿಸಲಾಗಿದೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ ಕೆ, ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರೀಶಿಲನೆ ನಡೆಸಿದರು. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಘಟನೆಯ ಕುರಿತು ಪ್ರಕರಣ ದಾಖಲುಗೊಂಡಿದೆ.