ಉಡುಪಿ, ಮೇ 08 (DaijiworldNews/MB) : ಉಡುಪಿಯಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆಕ್ಸಿಜನ್, ಬೆಡ್ಸ್ಗಳ ಬೇಡಿಕೆಯೂ ಕೂಡ ಹೆಚ್ಚಾಗುತ್ತಿದೆ. ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ 6000 ಲೀಟರ್ ಸಾಮರ್ಥ್ಯದ ಘಟಕ ಇದ್ದು ಅಲ್ಲಿನ ಬಳಕೆಗೆ ಮಾತ್ರ ಸಾಧ್ಯವಾಗಿದೆ. ಇದನ್ನರಿತ ಜಿಲ್ಲಾಡಳಿತ ತ್ವರಿತವಾಗಿ ಬೆಳಪುವಿನಲ್ಲಿ ಖಾಸಗಿ ಕಂಪನಿಯೊಂದರ ಆಕ್ಸಿಜನ್ ರಿಪಿಲ್ಲಿಂಗ್ ಘಟಕ ಸ್ಥಾಪಿಸಿದೆ.
ಈಗಾಗಲೇ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಎಸ್.ಎನ್. ಕ್ರೈಯೋಜನಿಕ್ಸ್ ಪ್ರೈ. ಲಿ. ಸಂಸ್ಥೆಯು 20000 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಕೈಗಾರಿಕೆಗೆ ಮತ್ತು ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ರಿಪಿಲ್ಲಿಂಗ್ ಘಟಕ ಸ್ಥಾಪನೆಯಾಗಿ ಹತ್ತು ದಿನಗಳು ಕಳೆದಿದ್ದು ಉಡುಪಿ ಜನತೆಗೆ 24×7 ನಿರಂತರ ಸೇವೆಯನ್ನು ನೀಡುತ್ತಾ ಬಂದಿದೆ.
ಜಿಲ್ಲೆಯ ಉಡುಪಿ, ಮಣಿಪಾಲ, ಕುಂದಾಪುರ, ಬ್ರಹ್ಮಾವರ, ಕಾರ್ಕಳ ಸೇರಿದಂತೆ ಸರಕಾರಿ ಮತ್ತು ಖಾಸಗಿ ವಲಯದ 40ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬೆಳಪುವಿನಿಂದ ಕಡಿಮೆ ಸಾಗಾಟ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಎಸ್.ಎನ್. ಕ್ರೈಯೋಜನಿಕ್ಸ್ ನ ಜನರಲ್ ಮ್ಯಾನೇಜರ್ ದಿನೇಶ್ ಬಂಗೇರ ತಿಳಿಸಿದ್ದಾರೆ.
ಲಿಕ್ವಿಡ್ ಆಕ್ಸಿಜನ್ ಪೂರೈಕೆ ಸದ್ಯದ ಮಟ್ಟಿಗೆ ಸಾಕಾಗುವಷ್ಟು ಇಲ್ಲ. ಬೇಡಿಕೆ ಹೆಚ್ಚಿದೆ. ಈಗಾಗಲೇ ಸರಕಾರ ಆದೇಶದಂತೆ ಕೈಗಾರಿಕಾ ಸಿಲಿಂಡರ್ನ್ನು ಹಿಂಪಡೆದು ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಪರಿವರ್ತಿಸಲಾಗುತ್ತಿದೆ.
ಪ್ರಸ್ತುತ ಉಡುಪಿ ಜಿಲ್ಲೆಯ ಆಸ್ಪತ್ರೆಗಳು ಮತ್ತು ಕೈಗಾರಿಕೆಗಳು ಬೈಕಂಪಾಡಿ ಮತ್ತು ಕಾರ್ನಾಡ್ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಆಕ್ಸಿಜನ್ ಘಟಕಗಳನ್ನು ಅವಲಂಬಿಸಿವೆ. ಬೆಳಪುವಿನ ಘಟಕ ಕಾರ್ಯಾರಂಭಿಸಿದಾಗ ಹೊರ ಜಿಲ್ಲೆಯ ಅವಲಂಬನೆ ಕಡಿಮೆಯಾಗಿದೆ.
ರಿಫಿಲ್ಲಿಂಗ್ ಘಟಕಕ್ಕೆ ಬೇಕಾಗುವ ಲಿಕ್ವಿಡ್ ಆಕ್ಸಿಜನ್ ಅನ್ನು ಬೆಂಗಳೂರು ಮತ್ತು ಬಳ್ಳಾರಿ ಸಮೀಪದ ತೋರಂಗಲ್ನಿಂದ ಕೊಚ್ಚಿಯಿಂದ ತರಿಸಿಕೊಳ್ಳಲಾಗುತ್ತದೆ. ಏಕಕಾಲಕ್ಕೆ 20 ಸಾವಿರ ಕ್ಯೂಬಿಕ್ ಮೀ. ಲಿಕ್ವಿಡ್ ಆಕ್ಸಿಜನ್ (-180 ಡಿಗ್ರಿ) ತರಿಸಿ ದಾಸ್ತಾನು ಇರಿಸಿಕೊಂಡು ಬಳಿಕ ಗ್ಯಾಸ್ ಆಗಿ ಸಂಸ್ಕರಿಸಿ ಸಿಲಿಂಡರ್ಗಳಿಗೆ ತುಂಬಲಾಗುತ್ತದೆ.
ಈ ಘಟಕದಲ್ಲಿ 3000 ಸಿಲಿಂಡರ್ ಆಕ್ಸಿಜನ್ ತುಂಬಿಸುವ ಸಾಮರ್ಥ್ಯ ವಿದ್ದರೂ 600-700 ಸಿಲಿಂಡರ್ಗಳನ್ನು ಒಮ್ಮೆಗೆ ತುಂಬಿಸಬಹುದಾಗಿದೆ.
ಪ್ರತಿ ದಿನ ಆಸ್ಪತ್ರೆಗಳಲ್ಲಿ ಹೆಚ್ಚು ತ್ತಿರುವ ಬೇಡಿಕೆ ಯಿಂದ ಒತ್ತಡದಲ್ಲಿ ಯೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದೇವೆ. ಹಿಂದೆ 10 ಸಿಲಿಂಡರ್ ಬೇಕಾಗಿದ್ದ ಆಸ್ಪತ್ರೆಗಳಿಗೆ ಈಗ 40 ಸಿಲಿಂಡರ್ ಬೇಡಿಕೆ ಇದೆ. 50 ಸಿಲಿಂಡರ್ ಬೇಕಾಗುವಲ್ಲಿ 200 ರಷ್ಟು ಸಿಲಿಂಡರ್ ಗಳು ಬಳಕೆಯಾಗುತ್ತಿವೆ.
ಈಗಾಗಲೇ ಬಹ್ರೈನ್ ನಿಂದ ಮಂಗಳೂರಿಗೆ 40 ಮೆಟ್ರಿಕ್ ಟನ್ ಆಮ್ಲಜನಕ ದ ಟ್ಯಾಂಕರ್ ಬಂದಿದ್ದು ಉಡುಪಿಗೆ 10000 ಟನ್ಸ್ ಲಿಕ್ವಿಡ್ ಆಕ್ಸಿಜನ್ ಹಂಚಿಕೆ ಯಾಗಿದೇ. ಆದರೆ ಕೆಲವು ತಂತ್ರಜ್ಞಾನದ ಕೊರತೆಯಿಂದ ಕೇವಲ 5000 ಟನ್ಸ್ ಅಷ್ಟು ಮಾತ್ರ ಪೂರೈಕೆ ಆಗಿದೆ. ಸರಿಯಾದ ಟ್ರಾನ್ಸ್ ಪೋರ್ಟೇಶನ್ ವ್ಯವಸ್ಥೆ ಯೂ ಆಗಬೇಕಿದೆ.
ಆಕ್ಸಿಜನ್ ಟ್ಯಾಂಕರ್ ಪೂರ್ಣ ತುಂಬಿದ್ದಾಗ ಮಾತ್ರ ಹೆಚ್ಚು ಒತ್ತಡದಿಂದ ಕಡಿಮೆ ಒತ್ತಡ ಮೂಲಕ ರಿಫಿಲ್ ಮಾಡಬಹುದು. ಕೆಲವೊಮ್ಮೆ ಆಕ್ಸಿಜನ್ ಕಡಿಮೆ ಪ್ರಮಾಣದಲ್ಲಿದ್ದ ಸಂದರ್ಭದಲ್ಲಿ ಆಕ್ಸಿಜನ್ ತುಂಬಿಸುವಾಗ ಮಧ್ಯೆ ಪೋಲಾಗುತ್ತದೆ.
"ನಮ್ಮ ಈ ಘಟಕ ಸ್ಥಾಪಿಸಲು ಜಿಲ್ಲಾಡಳಿತ, ಜನಪ್ರತಿನಿಧಿಗಳು ಉತ್ತಮ ಸಹಕಾರ ನೀಡಿದ್ದಾರೆ. ಪ್ರತಿ ತಾಲೂಕಿನಲ್ಲಿ ಒಂದು ಆಕ್ಸಿಜನ್ ಪ್ಲಾಂಟ್ ಇರಬೇಕು. ಆಗ ಆಸ್ಪತ್ರೆಗಳ ಒತ್ತಡ ಕಡಿಮೆ ಆಗುತ್ತದೆ. ಕೆಲವೊಮ್ಮೆ ಆಕ್ಸಿಜನ್ ಇದ್ದರೂ ತುಂಬಲು ಸಾಕಾಗುವಷ್ಟು ಸಿಲಿಂಡರ್ ಗಳು ಇರುವುದಿಲ್ಲ. ಈಗಿನ ಸಂದರ್ಭದಲ್ಲಿ ರೋಗಿಗಳ ಜೀವ ಕಾಪಾಡುವುದು ಮುಖ್ಯ. ಹಾಗಾಗಿ ಇನ್ನು ಸಣ್ಣ ಪುಟ್ಟ ಕೈಗಾರಿಕೆಯಲ್ಲಿ ಮತ್ತು ಗ್ಯಾರೇಜ್ ಗಳಲ್ಲಿ ಖಾಲಿ ಸಿಲಿಂಡರ್ ಗಳು ಹಾಗೆಯೆ ಇದೆ. ಅದನ್ನು ಅವರವರ ಏಜೆನ್ಸಿಗಳಿಗೆ ವಾಪಾಸು ಕೊಟ್ಟರೆ ತುರ್ತು ಅಗತ್ಯ ಇರುವ ರೋಗಿಗಳ ಪ್ರಾಣ ಕಾಪಾಡಬಹುದು" ಎಂದು ದಿನೇಶ್ ಬಂಗೇರ ಗ್ಯಾರೇಜ್ ಮಾಲಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಅಲ್ಲದೆ ಹೆಚ್ಚೆಚ್ಚು ಲಿಕ್ವಿಡ್ ಆಕ್ಸಿಜನ್ ಪೂರೈಕೆ ಆದರೆ ನಮ್ಮ ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಿಗೂ ನಾವು ಆಕ್ಸಿಜನ್ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ದಾಯ್ಜಿವರ್ಲ್ಡ್ ವಾಹಿನಿಗೆ ತಿಳಿಸಿದ್ದಾರೆ.