ಕಾಸರಗೋಡು, ಮೇ 08 (DaijiworldNews/MS): ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರಿ ಮೌಲ್ಯದ ಮದ್ಯವನ್ನು ಕಾಸರಗೋಡು ಅಬಕಾರಿ ದಳದ ವಿಶೇಷ ತಂಡ ವಶಪಡಿಸಿಕೊಂಡಿದ್ದು , ಆರೋಪಿ ಪರಾರಿಯಾಗಿದ್ದಾನೆ.
ಆಟೋ ರಿಕ್ಷಾದಲ್ಲಿ 11 ಕ್ಕೂ ಅಧಿಕ ಬಾಕ್ಸ್ ಗಳಲ್ಲಿ ಸಾಗಿಸುತ್ತಿದ್ದ 864 ಬಾಟ್ಲಿ ಕರ್ನಾಟಕ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕರ್ನಾಟಕದಿಂದ ಆಟೋದಲ್ಲಿ ಕೇರಳಕ್ಕೆ ಮದ್ಯ ಸಾಗಾಟ ಮಾಡುತ್ತಿದ್ದು, ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಪೆರ್ಲ ಅಡ್ಕಸ್ಥಳ ಸಮೀಪ ಅಕ್ರಮ ಮದ್ಯ ಸಾಗಾಟ ಪತ್ತೆ ಹಚ್ಚಲಾಗಿದೆ.
ಅಡ್ಕಸ್ಥಳದ ರಸ್ತೆ ಬದಿ ನಿಲುಗಡೆಗೊಳಿಸಲಾಗಿದ್ದ ಆಟೋ ವನ್ನು ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ. ಅಬಕಾರಿ ದಳದ ವಾಹನ ಕಂಡು ಆರೋಪಿ ಆಟೋ ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ . ಮದ್ಯ ಸಾಗಾಟಕ್ಕೆ ಸಂಬಂಧಪಟ್ಟಂತೆ ಬಿ . ಎಂ ನಾರಾಯಣ ಪೂಜಾರಿ ಎಂಬಾತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ . ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ . ಆರೋಪಿ ಈ ಹಿಂದೆಯೂ ಹಲವು ಬಾರಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.