ಮಂಗಳೂರು, ಮೇ 08 (DaijiworldNews/MB) : ಇಡೀ ದೇಶದಾದ್ಯಂತ ತೊಂದರೆ ಉಂಟು ಮಾಡಿರುವ ಕೊರೊನಾ ಎರಡನೇ ಅಲೆಯ ಯಾವುದೇ ಗಂಭೀರತೆ ನಗರದ ಜನರಿಗೆ ಇಲ್ಲದಂತೆ ಈ ವೀಕೆಂಡ್ ಲಾಕ್ಡೌನ್ ಸಂದರ್ಭ ಭಾಸವಾಗುತ್ತಿದೆ. ಜಿಲ್ಲಾಡಳಿತ ಶನಿವಾರ ಮತ್ತು ಭಾನುವಾರ ವೀಕೆಂಡ್ ಲಾಕ್ಡೌನ್ ಘೋಷಿಸಿದ್ದರೂ ಜನರು ಹಾಲಿನ ಬೂತ್ಗಳಲ್ಲಿ ಹಾಗೂ ತರಕಾರಿ ಅಂಗಡಿಗಳಿಗೆ ಮುಗಿಬಿದ್ದಿದ್ದು ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮೇ 8 ರ ಶನಿವಾರ ಬೆಳಿಗ್ಗೆ, ನಗರದ ಉರ್ವಸ್ಟೋರ್ನಲ್ಲಿನ ಹಾಲಿನ ಬೂತ್ನಲ್ಲಿ ಜನರು ಯಾವುದೇ ಸಾಮಾಜಿಕ ಅಂತರವಿಲ್ಲದೆ ಸೇರಿದ್ದು ಹರಟೆ ಹೊಡೆಯುತ್ತಿದ್ದುದ್ದು ಕಂಡು ಬಂದಿದೆ. ಇನ್ನು ಮಣ್ಣಗುಡ್ಡದ ತರಕಾರಿ ಅಂಗಡಿಗಳಲ್ಲಿಯೂ ಇದೇ ರೀತಿಯ ದೃಶ್ಯಗಳು ಕಂಡು ಬಂದಿದೆ.
ವಾಹನಗಳ ಅನಗತ್ಯಸಂಚಾರವನ್ನು ತಡೆಯಲು ನಗರದಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ರಥಬೀದಿ ಬಳಿಯ ನ್ಯೂ ಚಿತ್ರಾ ಟಾಕೀಸ್ ಜಂಕ್ಷನ್ನಲ್ಲಿ, ಯಾವುದೇ ಕಾರಣವಿಲ್ಲದೆ ತಿರುಗಾಡುತ್ತಿದ್ದ ವಾಹನಗಳ ಚಾಲಕರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ. ಅವರಿಗೆ ಗಂಭೀರತೆಯ ಬಗ್ಗೆ ತಿಳಿಸಿ ಮನೆಗೆ ವಾಪಾಸ್ ಹೋಗುವಂತೆ ಪೊಲೀಸರು ತಿಳಿಸಿದ್ದಾರೆ.
ಇನ್ನು ತಳ್ಳುಗಾಡಿಯಲ್ಲಿ ಹೂವುಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಹೂವು ಅಗತ್ಯ ವಸ್ತು ಅಲ್ಲದ ಕಾರಣ ವ್ಯಾಪಾರ ನಿಲ್ಲಿಸುವಂತೆ ಪೊಲೀಸರು ಮನವರಿಕೆ ಮಾಡಲು ಯತ್ನಿಸಿದ ಘಟನೆಯೂ ನಗರದಲ್ಲಿ ಕಂಡು ಬಂದಿದೆ. ಒಟ್ಟಾರೆಯಾಗಿ ಜನರಿಗೆ ಪದೇ ಪದೇ ಎಚ್ಚರಿಕೆ, ಮನವಿ ಮಾಡಿದರೂ ಜನರು ಡೋಂಟ್ ಕೇರ್ ಎಂದು ವರ್ತಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.