ಕುಂದಾಪುರ, ಮೇ.07 (DaijiworldNews/PY): ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗುತ್ತಿದ್ದ, ಈ ಹಿನ್ನೆಲೆ ಹೋಂ ಐಸೊಲೇಶನ್ ಕೆಲವರಿಗೆ ಕಷ್ಟವಾಗುತ್ತದೆ. ಅಂತಹವರಿಗೆ ಚಿಕಿತ್ಸೆ ನೀಡಲು ಕುಂದಾಪುರದ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಸಜ್ಜುಗೊಳಿಸಲಾಗಿದೆ.
ರೆಡ್ಕ್ರಾಸ್ ಸಂಸ್ಥೆ ಇದರ ಸಂಪೂರ್ಣ ಸಹಯೋಗ ವಹಿಸಲಿದ್ದು, ಈಗಾಗಲೇ 75 ಬೆಡ್ಗಳ ವ್ಯವಸ್ಥೆ, ಬೆಡ್ಶೀಟ್, ಪಿಲ್ಲೋ ಕವರ್, ಶುದ್ಧ ಕುಡಿಯುವ ನೀರು ಸಹಿತ ಮೂಲಭೂತ ಸೌಲಭ್ಯಗಳನ್ನು ರೆಡ್ಕ್ರಾಸ್ ಸಂಸ್ಥೆ ಒದಗಿಸಿದೆ.
ದಿನಕ್ಕೆ ಎರಡು ಬಾರಿ ತಜ್ಞ ವೈದ್ಯರು ರೋಗಿಗಳನ್ನು ಭೇಟಿ ಮಾಡಲಿದ್ದು, ರಾತ್ರಿ ವೇಳೆ ವೈದ್ಯರು ಇಲ್ಲಿಯೇ ಇದು ನಿಗಾ ವಹಿಸುತ್ತಾರೆ. ಇಬ್ಬರು ನರ್ಸ್ಗಳು ಇಲ್ಲಿಯೇ ಇದ್ದು ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಆಕ್ಸಿಜನ್ ವ್ಯವಸ್ಥೆಯನ್ನು ಕೂಡಾ ಮಾಡಿಕೊಳ್ಳಲಾಗಿದೆ.
ತಾಲೂಕು ವೈದ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕು ಆಯುಷ್ ಆಸ್ಪತ್ರೆಯ ಡಾ.ಅಶೋಕ್ ಇಲ್ಲಿನ ಮೇಲ್ವಿಚಾರಣೆ ನಡೆಸಲಿದ್ದಾರೆ. ನಿರಂತರಾಗಿ ದಾಖಲಾಗುವ ಕೊರೊನಾ ಸೋಂಕಿತರ ಮೇಲೆ ನಿಗಾ ವಹಿಸಲಾಗುತ್ತದೆ. ಸೋಂಕಿತರಲ್ಲಿ ಆರೋಗ್ಯ ಸಮಸ್ಯೆ ಉಲ್ಭಣಿಸಿದರೆ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತದೆ.
ಕಳೆದ ವರ್ಷವೂ ಕೂಡಾ ಇಲ್ಲಿ ಕೊರೊನಾ ಐಸೋಲೇಶನ್ ಸೆಂಟರ್ ಮಾಡಲಾಗಿದ್ದು, ಇಲ್ಲಿ ಸುಮಾರು 450 ಮಂದಿ ಚಿಕಿತ್ಸೆ ಪಡೆದಿದ್ದರು.