ಮಂಗಳೂರು, ಮೇ 07 (DaijiworldNews/MB) : ಕೊರೊನಾ ಸಂದರ್ಭದಲ್ಲಿ ಕಳೆದ ಬಾರಿಯೂ ಜನರ ಸಂಕಷ್ಟಕ್ಕೆ ಮಿಡಿದಿದ್ದ ಕರಾವಳಿಯ ಪ್ರತಿಷ್ಠಿತ ಕೈಗಾರಿಕೆಗಳು ಈ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸ್ಪಂದನೆ ನೀಡಿದೆ. ಈ ಮೂಲಕ ಕರಾವಳಿಯ ಪ್ರತಿಷ್ಠಿತ ಕೈಗಾರಿಕೆಗಳು ಮಾದರಿಯಾಗಿದೆ.
ಸಾಂದರ್ಭಿಕ ಚಿತ್ರ
ಪ್ರಸ್ತುತ ದೇಶದಾದ್ಯಂತ ಕೊರೊನಾ ಸೋಂಕು ಪ್ರಮಾಣ ಏರಿಕೆ ಕಾಣುತ್ತಿದೆ. ಈ ನಡುವೆ ಹಲವಾರು ವೈದ್ಯಕೀಯ ಸಮಸ್ಯೆಗಳನ್ನು ಕೂಡಾ ಈಡೀ ದೇಶವೇ ಎದುರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯೂ ಕೂಡಾ ಈ ಸಮಸ್ಯೆಯಿಂದ ಹೊರತಾಗಿಲ್ಲ. ಜಿಲ್ಲೆಯಲ್ಲಿಯೂ ಆಕ್ಸಿಜನ್ ಸಹಿತ ನಾನಾ ರೀತಿಯ ವೈದ್ಯಕೀಯ ಸವಲತ್ತುಗಳ ಸಮಸ್ಯೆ ಕಂಡು ಬರುತ್ತಿದೆ.
ಆದರೆ ಜಿಲ್ಲೆಯಲ್ಲಿ ಈ ಸಮಸ್ಯೆಯು ತೀರಾ ಹದಗೆಡದಂತೆ ತುರ್ತು ಕಾರ್ಯ ಪ್ರವೃತ್ತರಾಗಿರುವ ಎಂಆರ್ಪಿಎಲ್ನಂಥಹ ಹಲವು ಪ್ರತಿಷ್ಠಿತ ಕೈಗಾರಿಕೆಗಳು, ಜಿಲ್ಲೆಯಲ್ಲಿ ಅವಶ್ಯವಿರುವ ಸವಲತ್ತುಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಅದರ ನಿರ್ವಹಣೆಗೆ ಮುಂದೆ ಬಂದಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ''ಜಿಲ್ಲೆಯ ವಿವಿಧ ಕಂಪೆನಿಗಳು ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದ ನಿರ್ವಹಣೆಗೆ ಮುಂದೆ ಬಂದಿದ್ದಾರೆ. ಈಗಾಗಲೇ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ವೆನ್ಲಾಕ್ನಲ್ಲಿ ಎಂಆರ್ಪಿಎಲ್ ವತಿಯಿಂದ ಆಕ್ಸಿಜನ್ ಘಟಕ ನಿರ್ಮಾಣ ಈಗಾಗಲೇ ಆರಂಭವಾಗಿದ್ದು ಜೂನ್ ಮೊದಲ ವಾರದಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ಣವಾಗುವ ನಿರೀಕ್ಷೆಯಿದೆ'' ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಹಲವೆಡೆ ಆಕ್ಸಿಜನ್ ಉತ್ಪಾದನ ಘಟಕ ಸ್ಥಾಪನೆಗೆ ಪ್ರತಿಷ್ಠಿತ ಕೈಗಾರಿಕೆಗಳು ಕೈಜೋಡಿಸಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಎಂಆರ್ಪಿಎಲ್ ವತಿಯಿಂದ ಪ್ರತೀದಿನ 7 ಸಾವಿರ ಲೀ. ಸಾಮರ್ಥ್ಯದ ಆಕ್ಷಿಜನ್ ಘಟನೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ.
ಹಾಗೆಯೇ ಎಂಸಿಎಫ್ ವತಿಯಿಂದ ಜಿಲ್ಲೆಯ ಹಲವು ಕಡೆಗಳಲ್ಲಿ 80 ಲೀಟರ್ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇನ್ನು ಕೆಐಒಸಿಎಲ್ ವತಿಯಿಂದ 560 ಲೀಟರ್ ಸಾಮರ್ಥ್ಯದ ಹಾಗೂ ಗೈಲ್ ಸಂಸ್ಥೆಯ ವತಿಯಿಂದ 560 ಲೀ. ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ತಯಾರಿ ನಡೆಸಲಾಗುತ್ತಿದೆ.
ಇನ್ನು ಸರ್ಕಾರದಿಂದ ಸುಳ್ಯದಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ 85 ಜಂಬೋ ಸಿಲಿಂಡರ್ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಸಿದ್ದತೆ ಪ್ರಾರಂಭವಾಗಿದ್ದು ಒಟ್ಟು ಜಿಲ್ಲೆಯಲ್ಲಿ ಪ್ರತೀದಿನ 8,670 ಲೀ ಆಕ್ಸಿಜನ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ.
ಇನ್ನುಳಿದಂತೆ ಮಂಗಳೂರಿನ ಇಎಸ್ಐ ಆಸ್ಪತ್ರೆ, ಬಂಟ್ವಾಳ ಆಸ್ಪತ್ರೆಯಲ್ಲಿ 801 ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನ ಘಟಕ ನಿರ್ಮಾಣಕ್ಕೆ ಎಂಸಿಎಫ್ ಮುಂದೆ ಬಂದಿದೆ. ಪುತ್ತೂರು-ಬೆಳ್ತಂಗಡಿಯಲ್ಲಿ ಗೇಲ್ ಇಂಡಿಯಾ ಸಂಸ್ಥೆ, ಉಪ್ಪಿನಂಗಡಿ-ಮೂಡುಬಿದಿರೆಯಲ್ಲಿ ಕೆಐಒಸಿಎಲ್ ಸಂಸ್ಥೆ ತಮ್ಮ ಸಿಎಸ್ಆರ್ (ಸಾಮಾಜಿಕ ಬದ್ಧತ ನಿಧಿ) ಅಡಿಯಲ್ಲಿ ಸಹಾಯ ಹಸ್ತ ಚಾಚಿದೆ.
ಉಳ್ಳಾಲದಲ್ಲಿ ವಿದ್ಯುತ್ ಚಿತಾಗಾರವನ್ನು ಇನ್ಫೋಸಿಸ್ ನಿರ್ಮಿಸಲಿದೆ. ಉಳಿದಂತೆ ಎನ್ಎಂಪಿಟಿ, ಬಿಎಎಸ್ಎಫ್, ಎಸ್ಇಝಡ್ ಮೊದಲಾದವು ಜಿಲ್ಲೆಯಲ್ಲಿ ಆಂಬುಲೆನ್ಸ್ ನಿರ್ವಹಣೆ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಮಾಡುವ ಕಾರ್ಯ ನಿರ್ವಹಿಸುತ್ತಿದೆ.