ಮಂಗಳೂರು, ಮೇ 07 (DaijiworldNews/MB) : ಇನ್ನು ಮುಂದೆ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇದ್ದರೆ ಮಾತ್ರ ಆತನ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಇಲ್ಲವಾದರೆ ಆತನ ಆರ್ಟಿ-ಪಿಸಿಆರ್ ಪರೀಕ್ಷೆ ಜಿಲ್ಲೆಯಲ್ಲಿ ನಡೆಸಲಾಗುವುದಿಲ್ಲ. ಈ ನಿಯಮ ಮೇ 1 ರಿಂದಲೇ ಜಾರಿಗೆ ತರಲಾಗಿದೆ. ಏತನ್ಮಧ್ಯೆ ಪ್ರಮಾಣಪತ್ರದ ಅವಶ್ಯಕತೆ ಇದ್ದವರು ಯಾವುದೇ ಖಾಸಗಿ ಪ್ರಯೋಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆ ವೆಚ್ಚವನ್ನು ತಾವೇ ಭರಿಸಿ ಪರೀಕ್ಷೆಗೆ ಒಳಪಟ್ಟು ಪರೀಕ್ಷಾ ವರದಿಯನ್ನು ಪಡೆಯಬಹುದಾಗಿದೆ.
ಪ್ರಸ್ತುತ, ಜನರು ಪರೀಕ್ಷೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವೆನ್ಲಾಕ್ ಆಸ್ಪತ್ರೆಯಂತಹ ಸರ್ಕಾರಿ ಪರೀಕ್ಷಾ ಕೇಂದ್ರಗಳಿಗೆ ಹೋದರೆ ಅಲ್ಲಿ ವೈದ್ಯರು ಅವರನ್ನು ಮೊದಲು ಸಾಲಿನಲ್ಲಿ ಒಬ್ಬೊಬರದ್ದೆ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಜನರಿಗೆ ಕೆಮ್ಮು, ತಲೆನೋವು, ಮೈ ಕೈ ನೋವು ಮೊದಲಾದ ಕೊರೊನಾ ಸೋಂಕು ಲಕ್ಷಣಗಳು ಇದೆಯೇ ಎಂದು ಈ ವೈದ್ಯರು ಪರೀಕ್ಷಿಸಿ ಯಾವುದೇ ಕೊರೊನಾ ಲಕ್ಷಣಗಳು ಇಲ್ಲದವರ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸದೆ ವಾಪಾದ್ ಕಳುಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಜನರು ಅನಗತ್ಯವಾಗಿ ಭಯಭೀತರಾಗಿದ್ದಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಪರೀಕ್ಷಾ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ. ಇದರಿಂದಾಗಿ ನಿಜವಾಗಿ ಕೊರೊನಾ ಸೋಂಕು ಇರುವವರ ಕೊರೊನಾ ವರದಿ ಲಭ್ಯತೆಯ ವಿಳಂಬಕ್ಕೆ ಕಾರಣವಾಗುತ್ತಿದೆ. ಈ ಕಾರಣದಿಂದಾಗಿ ಈ ಬದಲಾವಣೆಯನ್ನು ತರಲಾಗಿದೆ ಎಂದು ಹೇಳಲಾಗಿದೆ.
ಇನ್ನು ಆರ್ಟಿ-ಪಿಸಿಆರ್ ಪರೀಕ್ಷಾ ಕಿಟ್ನ ಸಾಕಷ್ಟು ದಾಸ್ತಾನು ಇದೆ. ಟೆಸ್ಟ್ ಕಿಟ್ಗಳ ಕೊರತೆಯಿಂದ ಈ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಕೂಡಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಮ್ಮಲ್ಲಿ ಪ್ರಸ್ತುತ ಒಂದು ಲಕ್ಷ ಪರೀಕ್ಷಾ ಕಿಟ್ಗಳು ಇವೆ. ತೀರಾ ಅಗತ್ಯವಿರುವವರಿಗೆ ಕೊರೊನಾ ಸೋಂಕು ವರದಿಯನ್ನು ವಿಳಂಬವಿಲ್ಲದೆ ನೀಡುವ ಉದ್ದೇಶದಿಂದ ಮಾತ್ರ ಈ ಬದಲಾವಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇತರ ದೇಶಗಳಿಗೆ ಹೋಗುವವರಿಗೆ ಕೊರೊನಾ ಪರೀಕ್ಷಾ ವರದಿಗಳು ಕಡ್ಡಾಯವಾಗಿದೆ. ಈ ಜನರು ಸರದಿಯಲ್ಲಿ ನಿಂತು ಕಾಯಬೇಕಾದ ಸ್ಥಿತಿ ಬಂದೊದಗಿತ್ತು. ಈ ಹಿನ್ನೆಲೆ ಬದಲಾವಣೆ ತರಲಾಗಿದೆ. ಈ ರೀತಿ ವಿದೇಶ ಪ್ರಯಾಣ ನಡೆಸುವವರು, ಕೊರೊನಾ ಸೋಂಕು ವರದಿ ತೀರಾ ಅಗತ್ಯವಿರುವವರು ಖಾಸಗಿ ಆಸ್ಪತ್ರೆಗಳ ಮೂಲಕ ವರದಿಯನ್ನು ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ದಿನಕ್ಕೆ ಸರಾಸರಿ 1,500 ರಿಂದ 2,000 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈ ಬಾರಿ ಅದು 4,500 ಕ್ಕೆ ಏರಿದೆ. ಈಗ ಎಂಟು ಖಾಸಗಿ ಲ್ಯಾಬ್ಗಳಿವೆ ಹಾಗೂ ವೆನ್ಲಾಕ್ ಪ್ರತಿದಿನ 2,200 ಮಂದಿಯ ಪರೀಕ್ಷೆ ನಡೆಸುತ್ತಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್ ಕುಮಾರ್, ''ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ನಡೆಸುವುದು ಅನಗತ್ಯ. ಇದರಿಂದಾಗಿ ಯಾವುದೇ ಉದ್ದೇಶ ಸಾಧಿಸಲಾಗದು. ಜನರು ಅನಗತ್ಯವಾಗಿ ಕೊರೊನಾ ಪರೀಕ್ಷೆಗೆ ಒಳಪಡುವ ಮೂಲಕ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ. ಈ ಹಿನ್ನೆಲೆ ಕೊರೊನಾ ರೋಗಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ'' ಎಂದು ಹೇಳಿದರು.