ಮಂಗಳೂರು, ಮೇ 06 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸಭೆ ನಡೆಸಿ ಒಮ್ಮತದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಕೆಲವು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದ್ದು, ಅದರಲ್ಲಿ ಆನ್ ಲೈನ್ ಫುಡ್ ಡೆಲಿವರಿಗೂ ಒಂದಿಷ್ಟು ನಿರ್ಬಂಧ ವಿಧಿಸಲಾಗಿದೆ. ಅದರಂತೆ ನಿತ್ಯ ರಾತ್ರಿ 11 ಗಂಟೆಯ ಬಳಿಕ ಆನ್ ಲೈನ್ ಡೆಲಿವರಿ ಸೇವೆ ಬಂದ್ ಆಗಲಿದೆ.
ದಿನವಿಡಿ ಆನ್ ಲೈನ್ ಮೂಲಕ ಆಹಾರವನ್ನು ಬುಕ್ ಮಾಡಿ ಪಡೆದುಕೊಳ್ಳಬಹುದಾಗಿದೆ. ಸರಿಸುಮಾರು ರಾತ್ರಿ 10.30ರೊಳಗೆ ಕಾರ್ಯ ಮುಗಿಸಬೇಕಾಗಿದೆ. 11 ಗಂಟೆಯ ಬಳಿಕ ಫುಡ್ ಡೆಲಿವರಿ ನೆಪದಲ್ಲಿ ಓಡಾಟ ನಡೆಸಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ದೈಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, “ಜಿಲ್ಲೆಯಲ್ಲಿರುವ ಜನರ ಆಹಾರ ಪದ್ಧತಿಯನ್ನು ಗಮನಿಸಿದಾಗ ರಾತ್ರಿ 11 ಗಂಟೆಯೊಳಗೆ ಊಟೋಪಚಾರ ಪೂರ್ಣಗೊಳ್ಳುತ್ತದೆ. ನಾನು ಈ ಹಿಂದೆ ರಾತ್ರಿ ಪರಿಶೀಲನೆಗೆ ತೆರಳಿದ ಸಂದರ್ಭಗಳಲ್ಲಿ ಮಧ್ಯರಾತ್ರಿ 1 ಗಂಟೆಯಾದರೂ ಆನ್ ಲೈನ್ ಡೆಲಿವರಿ ನೀಡುವ ಸಂಸ್ಥೆಗಳಾದ ಸ್ವಿಗ್ಗಿ, ಝೊಮೇಟೊ ಇತ್ಯಾದಿಗಳ ಉದ್ಯೋಗಿಗಳು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ್ದೇನೆ. ರಾತ್ರಿ ವೇಳೆಯಲ್ಲಿ ಅವರು ಅನಗತ್ಯವಾಗಿ ಓಡಾಡುತ್ತಿರುವುದು ಸ್ಪಷ್ಟಗೊಂಡಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ” ಎಂದಿದ್ದಾರೆ.