ಮಂಗಳೂರು, ಮೇ 06 (DaijiworldNews/MS): ಕೊರೊನಾ ನಿಯಂತ್ರಣಕ್ಕಾಗಿ ನಾಳೆಯಿಂದ (ಮೇ.7)ರಿಂದ ದ.ಕ ಜಿಲ್ಲೆಯಲ್ಲಿ ಟಫ್ ರೂಲ್ಸ್ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಹೀಗಾಗಿ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ತುರ್ತು ಕೋವಿಡ್ ನಿರ್ವಹಣಾ ಸಭೆ ನಡೆದಿದ್ದು ಜನತಾ ಕರ್ಫ್ಯೂ ಕಟ್ಟು ನಿಟ್ಟಿನ ಅನುಷ್ಟಾನಕ್ಕೆ ಸಚಿವರ ಆದೇಶ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಬೆಳಗ್ಗೆ 6 ರಿಂದ 9 ಗಂಟೆಯಿಂದ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, 10 ಗಂಟೆ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕಾಗಿದೆ. ಅಲ್ಲದೆ ವಾಹನಗಳಲ್ಲಿ ಬೇರೆ ಕಡೆಗೆ ಓಡಾಡಿದರೆ ವಾಹನವನ್ನು ಸೀಜ್ ಮಾಡಲಾಗುವುದು. ಜನರ ಅನಗತ್ಯ ಓಡಾಟಕ್ಕೆ ಖಾಕಿಯಿಂದ ಕಠಿಣ ಕ್ರಮಕ್ಕೆ ಆದೇಶ ನೀಡಲಾಗಿದೆ.
ಇನ್ನು ಹತ್ತಿರದ ಔಷಧಾಲಯಗಳಿಂದ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿರುತ್ತದೆ.
ಮೇ.15 ರ ಮೇಲೆ ಅನುಮತಿ ನೀಡಿರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಯೋಜಿಸಲಾಗಿದ್ದು, ಒಂದು ವೇಳೆ ಕಾರ್ಯಕ್ರಮ ನಿಗದಿಯಾಗಿದ್ದರೆ ಅವರ ಮನವೊಲಿಸಿ ಅದನ್ನು ಮುಂದಕ್ಕೆ ಹಾಕಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಸಾಂಕ್ರಮಿಕ ರೋಗದ ಕೊಂಡಿ ಮುರಿಯಲು ಕಠಿಣ ನಿಯಮ ಅನಿವಾರ್ಯವಾಗಿದ್ದು ಜಿಲ್ಲೆಯ ಜನರು ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.