ಕಾರ್ಕಳ, ಮೇ 06 (DaijiworldNews/MS): ಸಮುದಾಯ ಮತ್ತು ಪ್ರಾಥಮಿಕ ಅರೋಗ್ಯ ಕೆಂದ್ರಗಳಿಗೆ ಪೂರಕ ಸೌಲಭ್ಯಗಳನ್ನು ಒದಗಿಸಿ ಗ್ರಾಮೀಣ ಮಟ್ಟದಲ್ಲಿಯೇ ಕೊರೋನಾ ನಿಗ್ರಹಿಸುವ ಕೆಲಸ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಸರಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಬಿಲ್ಲವ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ಕಾರ್ಕಳ ನಗರ ಕಾಂಗ್ರೆಸ್ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿಶಾಸಕ ದಿ.ಹೆಚ್. ಗೋಪಾಲ ಭಂಡಾರಿ ಸ್ಮರಣಾರ್ಥ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಕೈ ಮೀರಿ ಹೋಗುತ್ತಿದ್ದು ಇದಕ್ಕೆ ಜಿಲ್ಲಾಡಳಿತ ನೇರ ಹೊಣೆ. ಸರ್ವಪಕ್ಷಗಳ ಸಭೆ ಕರೆದು ಅಭಿಪ್ರಾಯ ಕ್ರೋಢೀಕರಿಸಿ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದು ಇಂದಿನ ಆಧ್ಯತೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತಾಡಿದ ಜಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಮಾತಾಡಿ ಕೋವಿಡ್-19 ಎರಡನೇ ಅಲೆಯ ಬಗ್ಗೆ ಗೊತ್ತಿದ್ದೂ ಸರಕಾರ ಪೂರ್ವ ತಯಾರಿ ಮಾಡದೆ ಅಸಡ್ಡೆ ಮಾಡಿದ್ದೇ ಈ ದುರಂತಕ್ಕೆ ಕಾರಣ. ಬಂಗಾಳ ಕೇರಳದಲ್ಲಿ ನಡೆದೆ ಯಾವುದೋ ಸಂಘರ್ಷಗಳ ಬಗ್ಗೆ ಮಾತಾಡುವ ಇಲ್ಲಿನ ಸಂಸದೆ ತನ್ನದೇ ಕ್ಷೇತ್ರದಲ್ಲಿ ಕೋರೋನಾಕ್ಕೆ ಬಲಿಯಾಗಿ ಬದುಕು ಕಳೆದುಕೊಂಡ ಕುಟುಂಬಗಳ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಅರ್.ರಾಜು, ನ್ಯಾಯವಾದಿ ಶೇಖರ ಮಡಿವಾಳ ಸಂದರ್ಭೊಚಿತವಾಗಿ ಮಾತಾಡಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪ್ರಸ್ತಾವನೆ ಗೈದು ರಕ್ತದಾನದ ಔಚಿತ್ಯದ ಬಗ್ಗೆ ಮಾತಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಹೆಬ್ರಿ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ ಕೋಟ್ಯಾನ್, ಕಾರ್ಕಳ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಮಾಜಿ ತಾಪ ಸದಸ್ಯ ಸುದಾಕರ ಶೆಟ್ಟಿ, ನಗರ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಕಾಂತಿ ಶೆಟ್ಟಿ, ನಗರ ಕಾಂಗ್ರಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.