ಮಂಗಳೂರು, ಮೇ.06 (DaijiworldNews/PY): ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೊನಾ ಸೋಂಕಿತರ ಮೇಲೆ ನಿಗಾ, ಪ್ರತ್ಯೇಕ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಕುರಿತಂತೆ ಕೊರೊನಾ ಸೆಂಟರ್ ಸ್ಥಾಪಿಸಲು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಯನ್ನು ನಡೆಸಿದರು.
ಸುರತ್ಕಲ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಸಮಾಜಕಲ್ಯಾಣ ಇಲಾಖೆಗೆ ಒಳಪಟ್ಟ ಹಾಸ್ಟೆಲ್, ಎನ್ಐಟಿಕೆ ಹಾಸ್ಟೆಲ್ ಹಾಗೂ ಹೊಸಬೆಟ್ಟುವಿನಲ್ಲಿರುವ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭಾಭವನವನ್ನು ಪರಿಶೀಲನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅವರು, "ಎನ್ಐಟಿಕೆಯಲ್ಲಿರುವ ಮೂರು ಕಟ್ಟಡಗಳನ್ನು ಪರಿಶೀಲನೆ ಮಾಡಲಾಗಿದೆ. ಇನ್ನೂರು ಬೆಡ್ಹೊಂದುವ ಸಾಮರ್ಥ್ಯವಿರುವ ಕೇಂದ್ರವನ್ನು ಸಿದ್ದಗೊಳಿಸಲಾಗಿದೆ. ಒಂದು ವೇಳೆ ಅವಶ್ಯಕತೆ ಇದ್ದಲ್ಲಿ ಪುನಃ ಮುನ್ನೂರು ಬೆಡ್ಗಳ ಐಸೋಲೇಷನ್ ಕೇಂದ್ರವನ್ನು ಇಲ್ಲಿ ನಿರ್ಮಿಸಲು ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಾವಿರಕ್ಕೂ ಹೆಚ್ಚು ಜನರ ನಿಗಾ ಕೇಂದ್ರಕ್ಕೆ ಅವಕಾಶವಿದೆ" ಎಂದು ತಿಳಿಸಿದ್ದಾರೆ.
"ಹೊಸಬೆಟ್ಟುವಿನಲ್ಲಿರುವ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭಾಭವನವನ್ನು ಕೂಡಾ ಪರಿಶೀಲಿಸಲಾಗಿದೆ. ಸ್ಥಳೀಯರಿಗೆ ಅವಶ್ಯಕತೆ ಇದ್ದಲ್ಲಿ ಬಳಸಲು ಸೂಕ್ತವಾದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ" ಎಂದಿದ್ದಾರೆ.
"ಕೊರೊನಾ ಪಾಸಿಟಿವ್ ಬಂದರೂ ಮನೆಯಲ್ಲಿ ಕುಳಿತುಕೊಳ್ಳದೇ ಓಡಾಡುತ್ತಿರುವ ಕಾರಣ ಮತ್ತಷ್ಟು ಸೋಂಕು ಹರಡಲು ಕಾರಣವಾಗುತ್ತಿರುವ ವಿಚಾರದ ಬಗ್ಗೆ ವರದಿಗಳು ಬರುತ್ತಿದ್ದು, ಇದರ ನಿಯಂತ್ರಣಕ್ಕೆ ಹಾಗೂ ಪಾಸಿಟಿವ್ ಆದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿರಿಸಲು ಐಸೋಲೇಷನ್ ಸೆಂಟರ್ ಅಗತ್ಯ" ಎಂದು ಹೇಳಿದ್ದಾರೆ.
"ಇಲ್ಲಿ ಊಟ, ಮೂರು ಹೊತ್ತು ನಿಗಾ ಸೇರಿದಂತೆ ಇತರೆ ವ್ಯವಸ್ಥೆ ಇರಲಿದೆ. ಮನೆಯಿಂದಲೂ ಕೂಡಾ ಊಟೋಪಾರಗಳನ್ನು ತರಿಸಿಕೊಳ್ಳಬಹುದು. ಇಲ್ಲಿ ವೈದ್ಯಕೀಯ ಸೇವೆಗೆ ನರ್ಸ್ಗಳು ಇರುತ್ತಾರೆ. ಸುರತ್ಕಲ್ ಮಾತ್ರವಲ್ಲದೇ ಗುರುಪುರ ಹಾಗೂ ಮುಚ್ಚೂರಿನಲ್ಲಿ ಮೂರು ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಜನರು ಭಯ ಪಡೆದೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕೈಜೋಡಿಸಬೇಕು" ಎಂದಿದ್ದಾರೆ.